ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಮನನೊಂದು ಯುವತಿ ವಿಷ ಸೇವಿಸಿ ಸಾವು
ಶಿವಮೊಗ್ಗ : ಮೊಬೈಲ್ ನೋಡದಂತೆ ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಇವತ್ತು ಸಾವನ್ನಪ್ಪಿದ್ದಾಳೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಹಾರನಹಳ್ಳಿಯ ಧನುಶ್ರೀ (20) ಮೃತಳು. ಮನೆಯಲ್ಲಿ ಓದುವುದನ್ನು ಬಿಟ್ಟು ಮೊಬೈಲ್ ಹಿಡಿದುಕೊಂಡಿದ್ದಕ್ಕೆ ತಾಯಿ ಬೈದಿದ್ದರಿಂದ ಮನನೊಂದು ಧನುಶ್ರೀ ಕಳೆನಾಶಕ ಸೇವಿಸಿದ್ದಳು. ಕೂಡಲೆ ಆಕೆಯನ್ನು ಆಯನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಯುವತಿ ಮೊದಲ ವರ್ಷದ ಪದವಿ ಓದುತ್ತಿದ್ದಳು. ಮನೆಯಲ್ಲಿ ಓದುವುದು ಬಿಟ್ಟು ಮೊಬೈಲ್ ನೋಡುತ್ತ ಕೂತಿದ್ದಿಯ ಎಂದು ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ವಿಷ ಸೇವಿಸಿದ್ದಾಳೆ. ಮೂರು ದಿನ ಆಕೆ ಜೀವನ್ಮರಣ ಸ್ಥಿತಿಯಲ್ಲಿದ್ದಳು.
ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.