ಹನಿ ಟ್ರಾಪ್ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ.
ಯುವಕನೊಬ್ಬನ ನಗ್ನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಯುವಕನಿಗೆ ಹೆದರಿಸಿದ್ದಾರೆ.
ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗದ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. ಬಂಧಿತ ಆರೋಪಿಗಳು.
ಆರೋಪಿ ಅಜಿತ್ ಜತೆ ಸಂತ್ರಸ್ತನು ಕಳೆದ 5 ವರ್ಷದಿಂದ ಪರಿಚಯ ಹೊಂದಿದ್ದ ಈ ಕಾರಣದಿಂದ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ ಸಂತ್ರಸ್ತನನ್ನು ನಂಬಿಸಿದ್ದರು.
ಘಟನೆಯ ಹಿನ್ನಲೆ :
ಯುವಕನೊಬ್ಬನಿಗೆ ಖಾಯಂ ಸರ್ಕಾರಿ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ಜ. 17ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು, ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ನಂತರ ಜ. 18ರಂದು ದೂರುದಾರರ ತಂದೆಯವರನ್ನು ಭೇಟಿ ಮಾಡಿ, ವಿಡಿಯೋ ಡಿಲೀಟ್ ಮಾಡಬೇಕು ಎಂದಾದರೆ, 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ, ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡು, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದರು.
ಹಣ ಕೊಡದಿದ್ದರೆ ಕೊಲೆ ಮಾಡಲಾಗುವುದು ಎಂದು ಹೆದರಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಹುಡುಕಿ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಈ ಮೂವರ ವಿರುದ್ಧ ಐಪಿಸಿ 386, 388, 406, 384, 342, 423, 506 ಸಹಿತ 34 ಪ್ರಕರಣಗಳು ದಾಖಲಾಗಿವೆ.