ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು
Forest department plantation watcher K.N. Ramu was seriously injured after a bear attack while on duty in Shidiginahalu village of Shikaripura taluk, Shivamogga district. Senior forest officials visited him at the hospital and provided support.
ಶಿಕಾರಿಪುರ: ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಪ್ಲಾಂಟೇಶನ್ ವಾಚರ್ ಮೇಲೆ ಕರಡಿ ಆಕಸ್ಮಿಕವಾಗಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶಿಕಾರಿಪುರ ತಾಲೂಕಿನ ಶಿಡಿಗಿನಾಳು ಗ್ರಾಮದಲ್ಲಿ ನಡೆದಿದೆ.
ಅರಣ್ಯ ಇಲಾಖೆಯಲ್ಲಿ ಪ್ಲಾಂಟೇಶನ್ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎನ್. ರಾಮು ಅವರು ಶಿಡಿಗಿನಾಳು ಭಾಗದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ದಿಢೀರನೆ ದಾಳಿ ಮಾಡಿದ ಕರಡಿಯಿಂದ ರಾಮು ಅವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದೀನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯ್ಕ್ ವಿ.ಎಸ್. ಹಾಗೂ ವಲಯ ಅರಣ್ಯಾಧಿಕಾರಿ ಪರಶುರಾಮ ಎಲ್. ಅವರು ರಾಮು ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ನಂತರ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಅಧಿಕಾರಿಗಳು, ಗಾಯಾಳುವಿಗೆ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ನೆರವು ಹಾಗೂ ಉತ್ತಮ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು. ಸಂಕಷ್ಟದಲ್ಲಿದ್ದ ಸಿಬ್ಬಂದಿಗೆ ತಕ್ಷಣದ ಆರ್ಥಿಕ ನೆರವನ್ನೂ ನೀಡುವ ಮೂಲಕ ಮಾನವೀಯ ಕಾಳಜಿ ತೋರಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ತಕ್ಷಣದ ಸ್ಪಂದನೆ ಹಾಗೂ ನೆರವಿಗೆ ಗಾಯಾಳು ರಾಮು ಅವರ ಕುಟುಂಬಸ್ಥರು ಮತ್ತು ಅರಣ್ಯ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.