



ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು – ಶಾಸಕ ಗೋಪಾಲಕೃಷ್ಣ ಬೇಳೂರು
ಕಲಾವಿದರನ್ನು ಕಡೆಗಣಿಸುವ ಸಂಪ್ರದಾಯ ಬೆಳೆಯುತ್ತಿರುವುದು ಆತಂಕಕಾರಿ – ಬಿ. ಟಾಕಪ್ಪ ಕಣ್ಣೂರು
MLA Gopalakrishna Beluru highlights global MNC job opportunities for rural graduates at the Ripponpet College event, alongside a call to preserve Karnataka’s folk arts by B. Takappa Kannur.
ರಿಪ್ಪನ್ಪೇಟೆ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉನ್ನತ ವ್ಯಾಸಂಗ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ ಉನ್ನತ ವಿದ್ಯಾರ್ಹತೆ ಹೊಂದಿರುವ ಯುವಕರಿಗೆ ವಿದೇಶಗಳಲ್ಲಿ ಕೆಂಪು ಕಂಬಳಿ ಸ್ವಾಗತ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ, ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಉಪನ್ಯಾಸಕರು ನಿಗಾವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಅಲ್ಲದೆ, ಸಮಾಜದಲ್ಲಿ ಮೂಢನಂಬಿಕೆ ಬಿತ್ತಿ ವಂಚಿಸುವವರ ಬಗ್ಗೆ ಯುವಜನತೆ ಜಾಗೃತರಾಗಿರಬೇಕು. ಎನ್.ಎಸ್.ಎಸ್ ಶಿಬಿರಗಳ ಮೂಲಕ ಸ್ವಚ್ಛತೆ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ಟಾಕಪ್ಪ ಕಣ್ಣೂರು, ಇಂದಿನ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತಿದ್ದು, ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಶ್ರೀಮಂತ ಜಾನಪದ ಕಲೆಗಳು ಮತ್ತು ಕಲಾವಿದರು ಮೂಲೆಗುಂಪಾಗುತ್ತಿರುವುದು ತೀವ್ರ ಆತಂಕದ ವಿಚಾರ. ಕರ್ನಾಟಕದಲ್ಲಿ ೧೮೪ಕ್ಕೂ ಹೆಚ್ಚು ಪ್ರಕಾರದ ಜಾನಪದ ಕಲೆಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಕಲಾವಿದರ ಬದುಕನ್ನು ಹಸನಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಹಿಂದೆ ನಿರ್ದಿಷ್ಟ ಪ್ರದೇಶ, ಜನಾಂಗಕ್ಕೆ ಸೀಮಿತವಾಗಿದ್ದ ಕಲೆಗಳು ಇಂದು ಎಲ್ಲೆಡೆ ವಿಸ್ತರಿಸಿದ್ದರೂ, ಮೂಲ ಉಡುಗೆ-ತೊಡುಗೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆರ್.ಕೆ. ರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಶ್ರೀನಿವಾಸ್ ಆಚಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪಿಯೂಸ್ ರೋಡ್ರಿಗಸ್, ಮಂಜುನಾಥ್ ಕಾಮತ್, ರಮೇಶ್ ಫ್ಯಾನ್ಸಿ, ರಾಘವೇಂದ್ರ ಕೆಂಚನಾಲ, ಹೊಸನಗರ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ ಕೆರೆಹಳ್ಳಿ ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.