ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಏ.5ರಿಂದ ಪಾದಯಾತ್ರೆ; ಏ.6ರಂದು ರಿಪ್ಪನ್ಪೇಟೆಯಲ್ಲಿ ಬೃಹತ್ ಸಮಾವೇಶ
ರಿಪ್ಪನ್ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಏಪ್ರಿಲ್ 5ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್ 6ರಂದು ರಿಪ್ಪನ್ಪೇಟೆಯ ಸಾಗರ ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮೂಲೆಗದ್ದೆ ಸದಾನಂದಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಎಂದರು.
ಈ ಕುರಿತು ರಿಪ್ಪನ್ಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುವಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ‘ಬದಲಾಗೋರು ತಮ್ಮ ಬದಲಾಗಿರಿ. ಬದಲಾಗುವ ಮುನ್ನ ಬದಲಾಗಿರಿ. ಹೊಸ ನಾಡು ಕಟ್ಟಲು ಮುಂದಾಗಿರಿ. ಜಾತಿ ಪಕ್ಷ ಮರೆತು ಒಂದಾಗಿರಿ…’ ಎಂಬ ಘೋಷವಾಕ್ಯಗಳೊಂದಿಗೆ ಈ ಪಾದಯಾತ್ರೆ ನಡೆಯಲಿದೆ. ಜಾತಿ-ಮತ ಭೇದ ಮರೆತು ಎಲ್ಲರೂ ಒಂದಾಗಿ ಕ್ಷೇತ್ರದ ಮರುಸ್ಥಾಪನೆಗಾಗಿ ಹೋರಾಟ ನಡೆಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.
ಏಪ್ರಿಲ್ 5ರಂದು ನಗರದಿಂದ ಪಾದಯಾತ್ರೆ ಪ್ರಾರಂಭವಾಗಿ, 96 ವರ್ಷದ ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ‘ಹೊಸನಗರ ವಿಧಾನಸಭಾ ಕ್ಷೇತ್ರ ಬೇಕೇ ಬೇಕು’ ಎಂಬ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಮರುವಿಂಗಡಣೆಯ ವೇಳೆ ಹೊಸನಗರ ಕ್ಷೇತ್ರವನ್ನು ವಿಂಗಡಿಸಿ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಲಾಗಿದೆ. ಇದರಿಂದ ಅಭಿವೃದ್ಧಿ ಹಿನ್ನಡೆಯಾಗಿದೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಹೊಸನಗರ ಕ್ಷೇತ್ರ ಮರುಸ್ಥಾಪನೆ ಅಗತ್ಯವಿದೆ ಎಂದು ಹೇಳಿದರು. ಪ್ರತಿಯೊಂದು ಮನೆಯಿಂದ ಕನಿಷ್ಠ ಒಬ್ಬರು ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಪಾದಯಾತ್ರೆ ಯಶಸ್ವಿಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಭಾಗವಹಿಸುವವರಿಗೆ ಊಟೋಪಚಾರ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಮುಖಂಡರಾದ ಚಂದ್ರಮೌಳಿಗೌಡ, ಎನ್.ಆರ್.ದೇವಾನಂದ, ಎನ್.ವರ್ತೇಶ್, ವೀರೇಶ್ ಆಲವಳ್ಳಿ, ಆರ್.ಎ.ಚಾಬುಸಾಬ್, ಬಂಡಿ ರಾಮಚಂದ್ರ, ಸುರೇಶ್ ಸ್ವಾಮಿರಾವ್, ಪದ್ಮಾ ಸುರೇಶ್, ನಾಗರತ್ನ ದೇವರಾಜ್, ವಾಣಿ ಗೋಂದಪ್ಪ, ಆರ್.ಡಿ. ಶೀಲಾ, ಶೈಲಾ ಆರ್.ಪ್ರಭು, ಶಾಹಿದಾಬಾನು, ಡಿ.ಈ. ಮಧುಸೂದನ್, ಆಸಿಫ್ ಬಾಷಾ, ನಿರೂಪ್ ಕುಮಾರ್, ಚಿದಂಬರ್ ಹೂವಿನಕೋಣೆ, ಗಣಪತಿ ಗವಟೂರು, ಜಿ.ಡಿ. ಮಲ್ಲಿಕಾರ್ಜುನ, ಧನಲಕ್ಷ್ಮಿ ಸೇರಿದಂತೆ ಅನೇಕರು ಹಾಜರಿದ್ದರು.