37 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ದರೋಡೆ ಪ್ರಕರಣದ ಆರೋಪಿ : 1989 ರಲ್ಲಿ ಗುಡ್ಡೆಕೊಪ್ಪದಲ್ಲಿ ನಡೆದಿದ್ದ ದರೋಡೆ
Malur Police arrested Abdul Khader, an accused in a 1989 dacoity case at Mrugavadhe in Thirthahalli, after 37 years of absconding. He was traced to Kerala and remanded to judicial custody.
ಶಿವಮೊಗ್ಗ, ಜು. 30: 1989ರಲ್ಲಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದ ಪ್ರಮುಖ ಆರೋಪಿಯನ್ನು 37 ವರ್ಷಗಳ ಬಳಿಕ ಮಾಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1989ರಲ್ಲಿ ನಡೆದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 63/1989 ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 395ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಅಬ್ದುಲ್ ಖಾದರ್ @ ಮೊಣು (57), ಮೂಲತಃ ಮಂಗಳೂರು ಜಿಲ್ಲೆಯ ಬಜ್ಪೆ ಸಮೀಪದ ಪೆರ್ರ ನಿವಾಸಿಯಾಗಿದ್ದು, ಕಳೆದ 37 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಈತನ ವಿರುದ್ಧ ನ್ಯಾಯಾಲಯವು LPR No. 20/2001 ದಾಖಲಿಸಿ ಪರಾರಿಯಾಗಿರುವ ಆರೋಪಿಯಾಗಿ ಘೋಷಿಸಿತ್ತು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ.ಜಿ., ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಮಾಳೂರು ವೃತ್ತದ ಸಿಪಿಐ ರಾಜಶೇಖರ್ ಹಾಗೂ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ಬಿ.ಸಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮೇಘರಾಜ್ ಮತ್ತು ಅಭಿಲಾಶ್ ಅವರು ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿ, ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮ ವ್ಯಾಪ್ತಿಯ ಪಾಡಿ–ಪುರ ಸಂಗೋಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದರು.
ಬಂಧಿತ ಆರೋಪಿಯನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.