ಆನಂದಪುರ ; ‘ಪ್ರಾಚೀನ ಬಂಗಾರದ ನಾಣ್ಯ’ ಹೆಸರಿನಲ್ಲಿ ₹9.60 ಲಕ್ಷ ವಂಚನೆ – ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಖದೀಮರು
A Mysuru man was allegedly cheated of ₹9.60 lakh in Shivamogga after fraudsters lured him with a fake deal involving ancient gold coins and treasure. Police have registered a case and launched an investigation.
ಶಿವಮೊಗ್ಗ: ಹಳೆಯ ಕಾಲದ ನಿಧಿ ಹಾಗೂ ಪ್ರಾಚೀನ ಬಂಗಾರದ ನಾಣ್ಯಗಳ ಆಸೆ ತೋರಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ₹9.60 ಲಕ್ಷ ವಂಚನೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮೈಸೂರಿನ ಕೆ.ಆರ್.ಪುರ ನಿವಾಸಿ ಜೆ. ಜಗದೀಶ್ (41) ವಂಚನೆಗೊಳಗಾದವರಾಗಿದ್ದು, ಅವರ ದೂರಿನ ಮೇರೆಗೆ ಆನಂದಪುರ ಪೊಲೀಸರು ಮಂಜು ಸೇರಿದಂತೆ ಐವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿಗಳು ಜಗದೀಶ್ ಅವರನ್ನು ಸಂಪರ್ಕಿಸಿ ಶಿವಮೊಗ್ಗದ ರಹಸ್ಯ ಸ್ಥಳವೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಾಚೀನ ಬಂಗಾರದ ನಾಣ್ಯಗಳು ಹಾಗೂ ನಿಧಿ ಸಿಕ್ಕಿರುವುದಾಗಿ ನಂಬಿಸಿದ್ದಾರೆ. ನಕಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಅವು ಅಸಲಿ ಪುರಾತನ ನಾಣ್ಯಗಳೆಂದು ವಿಶ್ವಾಸ ಮೂಡಿಸಿದ್ದಾರೆ.
ಇದನ್ನು ನಿಜವೆಂದು ನಂಬಿದ ಜಗದೀಶ್ ಅವರು ನಾಣ್ಯಗಳನ್ನು ಖರೀದಿಸಲು ಒಪ್ಪಿಕೊಂಡಿದ್ದು, ಜೂನ್ 3ರಂದು ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ₹10 ಲಕ್ಷಕ್ಕೆ ನೀಡುವುದಾಗಿ ಆರೋಪಿಗಳು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಣದ ವ್ಯವಸ್ಥೆಗಾಗಿ ಜಗದೀಶ್ ತಮ್ಮ ಮನೆಯ ದಾಖಲೆಗಳು ಹಾಗೂ ಶ್ಯೂರಿಟಿ ಚೆಕ್ ನೀಡಿ ಫೈನಾನ್ಸ್ ಸಂಸ್ಥೆಯಿಂದ ₹10 ಲಕ್ಷ ಸಾಲ ಪಡೆದಿದ್ದರು.
ನಂತರ ಶಿವಮೊಗ್ಗಕ್ಕೆ ಬಂದ ಜಗದೀಶ್ ಅವರಿಂದ ಆರೋಪಿಗಳು ₹9.60 ಲಕ್ಷ ನಗದು ಹಣ ಪಡೆದಿದ್ದಾರೆ. ಇದೇ ವೇಳೆ ಸಿನಿಮೀಯ ರೀತಿಯಲ್ಲಿ ಘಟನೆಗೆ ಹೊಸ ತಿರುವು ಸಿಕ್ಕಿದೆ. ವ್ಯವಹಾರ ನಡೆಯುತ್ತಿದ್ದ ಸ್ಥಳಕ್ಕೆ ಎರಡು ಬೈಕ್ಗಳಲ್ಲಿ ನಾಲ್ವರು ಅಪರಿಚಿತರು ಆಗಮಿಸಿ, “ನೀವು ಯಾವ ಊರಿನವರು? ಇಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದೀರಾ? ಗಾಂಜಾ ಮಾರಾಟ ಮಾಡುತ್ತಿದ್ದೀರಾ?” ಎಂದು ಗದರಿಸಿದ್ದಾರೆ.
ಈ ಗೊಂದಲದ ನಡುವೆ ಅಲ್ಲಿದ್ದ ಮೊದಲ ಇಬ್ಬರು ಆರೋಪಿಗಳು “ಯಾರೋ ಬಂದಿದ್ದಾರೆ, ಓಡಿ ಹೋಗಿ” ಎಂದು ಹೇಳಿ, ಜಗದೀಶ್ ಅವರ ಕೈಯಲ್ಲಿದ್ದ ₹9.60 ಲಕ್ಷ ನಗದು ಹಣದ ಬ್ಯಾಗ್ ಹಾಗೂ ನಾಣ್ಯಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಅಲ್ಲದೆ, ಘಟನೆಯ ವಿಡಿಯೋ ಚಿತ್ರೀಕರಿಸುತ್ತಿದ್ದ ಮನೋಜ್ ಅವರ ಮೊಬೈಲ್ ಹಾಗೂ ಜಗದೀಶ್ ಅವರ ಮೊಬೈಲ್ ಫೋನ್ಗಳನ್ನೂ ಕಸಿದುಕೊಂಡು ಉಳಿದವರು ಬೈಕ್ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ತಾವು ಮೋಸ ಹೋಗಿರುವುದು ತಿಳಿದ ಬಳಿಕ ಜಗದೀಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಆನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.