Headlines

ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು: ವಿಷಪ್ರಾಶನ ಶಂಕೆ, ತನಿಖೆಗೆ ಆಗ್ರಹ

Suspicious death of a leopard in Shikaripura after attacking a farmer raises poisoning concerns; forest officials suspect starvation while experts demand toxicology investigation.

ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ತಡಸ ಗ್ರಾಮದ ನಿವಾಸಿ ರೈತ ಮುತ್ತಣ್ಣ ಸೇರಿದಂತೆ ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ ಇಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ.

ಭಾನುವಾರ ರೈತನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದ ಇದೇ ಚಿರತೆ, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲೆಯಾಗುವಂತೆ ಮಾಡಿತ್ತು.
ಇಂದು ಚಿರತೆಯ ಮೃತದೇಹ ಪತ್ತೆಯಾಗಿದ್ದು, ಅದರ ದೇಹದಲ್ಲಿ ಯಾವುದೇ ಗೋಚರ ಗಾಯಗಳಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಫಯಾಜುದ್ದೀನ್ ಡಿಸಿ ಅವರು, “ಚಿರತೆ ಹಸಿವಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ” ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಜೊತೆಗೆ, ಈ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಯಲಿದೆ ಎಂದೂ ತಿಳಿಸಿದ್ದಾರೆ.

ಆದರೆ, ಈ ವಿವರಣೆ ಬಗ್ಗೆ ಸ್ಥಳೀಯರು ಮತ್ತು ವನ್ಯಜೀವಿ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ನಿನ್ನೆ ದಾಳಿ ನಡೆಸಿದ ಚಿರತೆ ಇಂದು ಸಾವು ಕಂಡಿರುವುದು ವಿಷಪ್ರಾಶನ ಶಂಕೆಯನ್ನು ಹೆಚ್ಚಿಸಿದೆ. ಚಿರತೆಯ ದೇಹದಲ್ಲಿ ಗಾಯಗಳಿಲ್ಲದಿರುವುದು ಈ ಅನುಮಾನಕ್ಕೆ ಮತ್ತಷ್ಟು ಬಲ ನೀಡುತ್ತಿದೆ.

ಇತ್ತೀಚೆಗೆ ಶಿಕಾರಿಪುರ ಭಾಗದಲ್ಲಿ ಚಿರತೆಗಳ ಸರಣಿ ಸಾವುಗಳು ವರದಿಯಾಗುತ್ತಿದ್ದು, ಜನರಲ್ಲಿ ಭೀತಿ ಉಂಟಾಗಿದೆ. ಕೆಲವೇ ದಿನಗಳ ಹಿಂದೆ ತಡಸನಹಳ್ಳಿಯಲ್ಲಿ ದಾಳಿ ನಡೆಸಿದ ಮರುದಿನವೇ ಹೆಣ್ಣು ಚಿರತೆಯೊಂದು ಮೃತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ನಿಗೂಢ ಸಾವು ಎನ್ನಲಾಗಿದೆ.

ಅರಣ್ಯ ಇಲಾಖೆ ಹಸಿವಿನಿಂದ ಸಾವು ಎಂದು ಶಂಕಿಸುತ್ತಿರುವಾಗ, ವನ್ಯಜೀವಿ ತಜ್ಞರು ವಿಷಪ್ರಾಶನದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ ಎಂದು ಹೇಳಿ, ವಿಷಶಾಸ್ತ್ರ (ಟಾಕ್ಸಿಕಾಲಜಿ) ವರದಿ ಪ್ರಕಟಿಸಲು ಆಗ್ರಹಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಚಿರತೆ ಮರಿಯ ಸಾವಿನ ತನಿಖೆಯೂ ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಈ ಬೆಳವಣಿಗೆಗಳ ನಡುವೆ, ಚಿರತೆಗಳ ಸಾವಿನ ಹಿಂದಿನ ನಿಜವಾದ ಕಾರಣ ಹೊರಬರಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

About The Author