POSTMANNEWS

ನೈಜ ಸುದ್ದಿ ನೇರ ಬಿತ್ತರ..

ಅಂತರ್‌ರಾಜ್ಯ ಸರಗಳ್ಳರ ಜಾಲ ಪತ್ತೆ: ಮಾಂಗಲ್ಯ ಸರ ಕಳ್ಳತನ ಪ್ರಕರಣ ಭೇದಿಸಿ ನಾಲ್ವರ ಬಂಧನ

Shivamogga police busted an inter-state chain snatching gang and arrested four accused, recovering gold ornaments worth Rs 25 lakh and a bike used in the crime.

ಅಂತರ್‌ರಾಜ್ಯ ಸರಗಳ್ಳರ ಜಾಲ ಪತ್ತೆ: ಮಾಂಗಲ್ಯ ಸರ ಕಳ್ಳತನ ಪ್ರಕರಣ ಭೇದಿಸಿ ನಾಲ್ವರ ಬಂಧನ

ಶಿವಮೊಗ್ಗ: ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ ವಿನೋಬನಗರ ಪೊಲೀಸರು, ಬಂಧಿತರು ಅಂತರ್‌ರಾಜ್ಯ ಮಟ್ಟದಲ್ಲಿ ಸರಗಳ್ಳತನ ಹಾಗೂ ಒಂಟಿ ಮನೆ ದರೋಡೆಗಳಲ್ಲಿ ತೊಡಗಿದ್ದವರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕಳೆದ ನವೆಂಬರ್ 18ರಂದು ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯ 16ನೇ ಕ್ರಾಸ್‌ನಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅಪರಿಚಿತನೊಬ್ಬ ಹಿಂಬದಿಯಿಂದ ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಕಾಯುತ್ತಿದ್ದ ಮತ್ತೊಬ್ಬನ ಬೈಕ್‌ನಲ್ಲಿ ಪರಾರಿಯಾಗಿದ್ದನು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಕೊಯಮತ್ತೂರಿನ ಅರಸು ಅಲಿಯಾಸ್ ವಲ್ಲರಸು ಆರ್ (25), ಬೆಂಗಳೂರಿನ ಪಾದರಾಯಪುರ ಗುಡ್ಡದಹಳ್ಳಿಯ ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (ಇಬ್ರಾಹಿಂ ಬಾಶಾ), ಸೇಲಂನ ಕೇಶವನ್ (43) ಹಾಗೂ ತಮಿಳುನಾಡಿನ ಹೊಸೂರು ಮೂಲದ ಚಾಲಕ, ಹಾಲಿ ಅತ್ತಿಬೆಲೆಯ ನಿವಾಸಿ ಸತೀಶ್‌ಕುಮಾರ್ (40) ಎಂದು ಗುರುತಿಸಲಾಗಿದೆ.

ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಬಳಿ ವಿನೋಬನಗರ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ 40 ಗ್ರಾಂ ತೂಕದ ಗಟ್ಟಿ ಬಂಗಾರ (ಅಂದಾಜು ಮೌಲ್ಯ ರೂ.4.80 ಲಕ್ಷ) ಹಾಗೂ ಕೃತ್ಯಕ್ಕೆ ಬಳಸಿದ್ದ ಟಿಎನ್-90 ಎಲ್-6618 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಎನ್-250 ಬೈಕ್ (ಮೌಲ್ಯ ರೂ.1.50 ಲಕ್ಷ) ವಶಪಡಿಸಿಕೊಳ್ಳಲಾಗಿದೆ.

ಮೂರನೇ ಆರೋಪಿ ಕೇಶವನ್ ಬಳಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ 70 ಗ್ರಾಂ ತೂಕದ ಮಾಂಗಲ್ಯ ಸರ (ಮೌಲ್ಯ ರೂ.8.50 ಲಕ್ಷ) ಹಾಗೂ ವಿನೋಬನಗರ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ 60 ಗ್ರಾಂ ತೂಕದ ಬಂಗಾರದ ಆಭರಣಗಳು (ಮೌಲ್ಯ ರೂ.10.20 ಲಕ್ಷ) ಪತ್ತೆಯಾಗಿವೆ. ಒಟ್ಟು ವಶಪಡಿಸಿದ ಚಿನ್ನಾಭರಣಗಳ ಅಂದಾಜು ಮೌಲ್ಯ ಸುಮಾರು ರೂ.25 ಲಕ್ಷವಾಗಿದೆ.

ಈ ಪತ್ತೆ ಕಾರ್ಯದಲ್ಲಿ ಡಿವೈಎಸ್‌ಪಿ ಸಂಜೀವಕುಮಾರ್, ಸಿಪಿಐ ಸಂತೋಷ್‌ಕುಮಾರ್, ಎಸ್‌ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳು ಶ್ರಮವಹಿಸಿದ್ದು, ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ನಿಖಿಲ್ ಅವರು ತಂಡವನ್ನು ಶ್ಲಾಘಿಸಿದ್ದಾರೆ.

About The Author