Former Karnataka minister ಹರತಾಳು ಹಾಲಪ್ಪ visits Edamane village in Sagar taluk, slams Forest Department eviction notices, and assures protection to 16 families living on ancestral land.
ಅರಣ್ಯ ಇಲಾಖೆಯ ತೆರವು ನೋಟಿಸ್ಗೆ ತಿರುಗೇಟು: ಎಡಮನೆ ರೈತರ ಪರ ಹರತಾಳು ಹಾಲಪ್ಪ ಸ್ಪಷ್ಟ ಘೋಷಣೆ
ಸಾಗರ ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಚನ್ನಗೊಂಡ ಗ್ರಾಮ ಪಂಚಾಯಿತಿಯ ಕಟ್ಟಿನಕಾರು ಸಮೀಪದ ಎಡಮನೆ ಪ್ರದೇಶದ ಕುಟುಂಬಗಳಿಗೆ ಅರಣ್ಯ ಇಲಾಖೆ ತೆರವು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಈ ವೇಳೆ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಅವರು, ಶರಾವತಿ ಸಂತ್ರಸ್ತರಾದ ಎಡಮನೆ ಗ್ರಾಮದ ಉಳುವವನೇ ಹೊಲದ 16 ಕುಟುಂಬಗಳು ತಲೆತಲಾಂತರದಿಂದಲೇ ಈ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡು ಬಂದಿರುವುದಾಗಿ ಹೇಳಿದರು. “ಇವರು ಒಡೆಯರಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಭತ್ತ, ಅಡಕೆ ಹಾಗೂ ತೆಂಗು ಬೆಳೆಸಿಕೊಂಡು ಜೀವನ ನಡೆಸುತ್ತಿರುವ ರೈತರನ್ನು ಕೇವಲ ದಾಖಲೆಗಳಲ್ಲಿ ಕಾನೂನು ತೊಡಕು ಇದೆ ಎಂಬ ಕಾರಣ ನೀಡಿ ತೆರವುಗೊಳಿಸುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. ಈ ವಿಚಾರವನ್ನು ಪಕ್ಷದ ಮಟ್ಟದಲ್ಲಿ ರಾಜ್ಯಮಟ್ಟದ ಹೋರಾಟವಾಗಿ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
2013ರ ಜನವರಿ 5ರಂದು ಕೋರ್ಟ್ ಆದೇಶ ಬಂದಿರುವುದನ್ನು ಉಲ್ಲೇಖಿಸಿದ ಹಾಲಪ್ಪ, “ಆ ಸಮಯದಲ್ಲಿ ಅಧಿಕಾರದಲ್ಲಿದ್ದವರು ಯಾರು? ಇಷ್ಟು ವರ್ಷಗಳ ಕಾಲ ಅಧಿಕಾರಿಗಳು ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದರು. ಈ ಸಮಸ್ಯೆಗೆ ನೇರವಾಗಿ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಗಾರರು ಎಂದು ದೂರಿದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಯಲಕುಂಡ್ಲಿ, ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಲಕ್ಷ್ಮೀನಾರಾಯಣ ಭಟ್, ಪಂಚಾಯಿತಿ ಸದಸ್ಯರಾದ ನಾಗರಾಜ್ ವಾಟೆಮಕ್ಕಿ, ರಾಜೇಶ್ ಯಲಕೋಡ ಸೇರಿದಂತೆ ಹಲವರು ರೈತರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.














