POSTMANNEWS

ನೈಜ ಸುದ್ದಿ ನೇರ ಬಿತ್ತರ..

ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು

Two brothers convicted for attacking a Police Sub-Inspector during a ganja case investigation in Shivamogga. Court sentences them to two years jail, imposes fine and orders compensation to the PSI and witnesses.

ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ , ಇಬ್ಬರಿಗೆ ಶಿಕ್ಷೆ ಪ್ರಕಟ : ಮಂಡಘಟ್ಟದಲ್ಲಿ ನಡೆದ ಕೃತ್ಯಕ್ಕೆ ತೀರ್ಪು

ಶಿವಮೊಗ್ಗ: ಗಾಂಜಾ ಪ್ರಕರಣದ ವಿಚಾರಣೆಗೆ ಆರೋಪಿಯನ್ನು ಕರೆದುಕೊಂಡು ಹೋಗುವ ವೇಳೆ ಪಿಎಸ್‌ಐ ಹಾಗೂ ಪೊಲೀಸರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಅಣ್ಣ–ತಮ್ಮರಿಗೆ ನ್ಯಾಯಾಲಯ ಎರಡು ವರ್ಷಗಳ ಕಾರಾವಾಸ, ದಂಡ ಹಾಗೂ ಪರಿಹಾರ ವಿಧಿಸಿದೆ.

2022ರಲ್ಲಿ ಕುಂಸಿ ಠಾಣೆ ವ್ಯಾಪ್ತಿಯ ಆಯನೂರು ಸಮೀಪದ ಮಂಡಘಟ್ಟದಲ್ಲಿ ಈ ಘಟನೆ ನಡೆದಿತ್ತು. ಗಾಂಜಾ ಪ್ರಕರಣ (ಗುನ್ನೆ ನಂ.163/2020) ಸಂಬಂಧ ಆರೋಪಿಯಾದ ಮಧುಕುಮಾರ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ, ಆತನ ಸಹೋದರ ಮನುಕುಮಾರ್ ಪಿಎಸ್‌ಐ ನವೀನ್ ಮಠಪತಿ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದನು. ಬಳಿಕ ಮಧುಕುಮಾರ್ ಸಹ ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದನು.

ಈ ಸಂಬಂಧ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.164/2020 ಅಡಿಯಲ್ಲಿ ಐಪಿಸಿ ಕಲಂಗಳು 324, 504, 307, 353, 332, 186, 323, 506 ಸಹಿತ 34ರಂತೆ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ (ಹಾಲಿ ಡಿವೈಎಸ್ಪಿ, ಶಿವಮೊಗ್ಗ ಉಪವಿಭಾಗ) ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಯಶವಂತ ಕುಮಾರ್ ಫೆ.6ರಂದು ಮಂಡಘಟ್ಟದ ಮನುಕುಮಾರ್ ಅಲಿಯಾಸ್ ಮನು (23) ಹಾಗೂ ಮಧುಕುಮಾರ್ ಅಲಿಯಾಸ್ ಮಧು (24) ಅವರಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಪ್ರತಿಯೊಬ್ಬರಿಗೂ ₹17,500 ದಂಡ ವಿಧಿಸಿದ್ದಾರೆ.

ಇದಲ್ಲದೆ, ಪಿರ್ಯಾದುದಾರ ಪಿಎಸ್‌ಐ ನವೀನ್ ಮಠಪತಿ ಅವರಿಗೆ ₹20,000 ಮತ್ತು ಸಾಕ್ಷಿದಾರ ಬಸವಂತಪ್ಪ ಅವರಿಗೆ ₹10,000 ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.

About The Author