ಎಲ್ಲೆಲ್ಲೂ RCB ಹವಾ – ರಕ್ತದಾನ, ಪ್ರಾರ್ಥನೆ ; RCB ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟ ಶಾಸಕ ಬೇಳೂರು

ಸುಮಾರು 60 ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇಂದು ತೆರೆ ಬೀಳಲಿದೆ.18ನೇ ಆವೃತ್ತಿಯ ಐಪಿಎಲ್ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ.
ಉಭಯ ತಂಡಗಳು ಸತತ 17 ವರ್ಷ ಕಠಿಣ ತಪ್ಪಸ್ಸನ್ನೇ ಮಾಡಿದ್ದು, ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿವೆ. ಇಬ್ಬರಲ್ಲಿ ಒಬ್ಬರ 17 ವರ್ಷಗಳ ವನವಾಸಕ್ಕೆ ಇಂದು ತೆರೆ ಬೀಳಲಿದೆ.ಟ್ರೋಫಿಯ ಮೇಲೆ ಯಾವ ತಂಡದ ಹೆಸರು ಮುದ್ರಣವಾಗಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ಇನ್ನೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ RCB ಅಭಿಮಾನಿಗೆ ಖುಷಿಯ ವಿಷಯ ನೀಡಿದ್ದಾರೆ..
RCB ಮತ್ತು ಪಂಜಾಬ್ ನಡುವಿನ ಫೈನಲ್ ಪಂದ್ಯವಿರುವುದರಿಂದ ಇಂದು ಸಂಜೆ ಸಾಗರದ ಗಾಂಧಿ ಮೈದಾನದಲ್ಲಿ ಹಾಗೂ ಹೊಸನಗರದ ಈಡಿಗರ ಭವನದಲ್ಲಿ ಎಲ್.ಇ.ಡಿ ವಾಲ್ ನಲ್ಲಿ ಪಂದ್ಯದ ನೇರಪ್ರಸಾರದ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. RCB ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲು ಕೋರಿದ್ದಾರೆ.
ಇನ್ನೂ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಪ್ ಗೆಲ್ಲಲಿ ಎಂದು ಶಿವಮೊಗ್ಗದಲ್ಲಿ ಪೂಜೆ, ರಕ್ತದಾನ, ಹಾಲಿನ ಅಭಿಷೇಕ ನಡೆಯುತ್ತಿದೆ. ಇಂದು ಪಂದ್ಯಾವಳಿ ವೀಕ್ಷಣೆಗೆ ವಿವಿಧೆಡೆ ಬೃಹತ್ ಪರದೆಗಳನ್ನು ಹಾಕಲಾಗುತ್ತಿದೆ.
RCB ಗೆಲುವಿಗಾಗಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜು, ಮೆಗ್ಗಾನ್ ಆಸ್ಪತ್ರೆ ಮತ್ತು ಹೊಳೆಬೆನವಳ್ಳಿ ಯುವಕರು ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆಯಿಂದ 25 ಯುನಿಟ್ಗಿಂತಲು ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲಾಗಿದೆ.
ಆರ್ಸಿಬಿ ತಂಡ ಕಪ್ ಗೆಲ್ಲಲಿ ಎಂದು ಹಾರೈಸಿ ಶಿವಮೊಗ್ಗದಲ್ಲಿ ಚಿಣ್ಣರು ಕನ್ನಡದ ಧ್ವಜ ಹಿಡಿದು ನೃತ್ಯ ಮಾಡಿದ್ದಾರೆ. ಸ್ಟೈಲ್ ಡಾನ್ಸ್ ಗ್ರೂಪ್ನ ಮಕ್ಕಳು ಆರ್ಸಿಬಿ ಪರವಾಗಿ ಘೋಷಣೆ ಕೂಗುತ್ತ, ನಾಡ ಧ್ವಜ ಹಿಡಿದು ಹುರಿದುಂಬಿಸಿದರು.
ಆರ್ಸಿಬಿ ತಂಡ ಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಷ್ಟ್ರಭಕ್ತರ ಬಳಗದ ವತಿಯಿಂದ ಗಣಪತಿ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು. ನಾವೆಲ್ಲಾ ಹೇಳೋದು ಒಂದೇ ಈ ಸಲ ಕಪ್ ನಮ್ದೆ ಎಂದು ರಾಷ್ಟ್ರಭಕ್ತರ ಬಳಗದ ಸದಸ್ಯರು ಘೋಷಣೆ ಕೂಗಿದರು.