ಗೃಹರಕ್ಷಕರು ಪೊಲೀಸ್ ಇಲಾಖೆಯ ಬಲಗೈ ಇದ್ದಂತೆ – ಡಿವೈಎಸ್ಪಿ ಅರವಿಂದ್ ಕಲಗುಜ್ಜಿ
ರಿಪ್ಪನ್ ಪೇಟೆ : ಗೃಹರಕ್ಷಕ ದಳದವರು ಪೊಲೀಸ್ ಇಲಾಖೆಯೊಂದಿಗೆ ಸಮಾಜದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಗೃಹರಕ್ಷಕ ದಳ ಪೊಲೀಸ್ ಇಲಾಖೆಯ ಬಲಗೈ ಇದ್ದಂತೆ ಎಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಅರವಿಂದ್ ಅಭಿಪ್ರಾಯ ಪಟ್ಟರು.
ಹೊಂಬುಜ ಮಠದ ಆವರಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಆಯೋಜಿಸಿದ್ದ 10 ದಿನಗಳ ಗೃಹರಕ್ಷಕರ ವಾರ್ಷಿಕ ಮೂಲ ತರಭೇತಿ ಶಿಬಿರದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗೃಹ ರಕ್ಷಕ ದಳವನ್ನು 1962ರಲ್ಲಿ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ಗೃಹರಕ್ಷಕ ದಳದವರು ಪೊಲೀಸ್ ಇಲಾಖೆಯೊಂದಿಗೆ ಸಮಾಜದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಿಂದೆ ಸ್ವಯಂ ಸೇವಕರಾಗಿ ದುಡಿಯಲು ಗೃಹರಕ್ಷಕ ದಳಕ್ಕೆ ಸೇರುವ ಜನರ ಸಂಖ್ಯೆ ವಿರಳವಾಗಿತ್ತು. ಆದರೆ ಕಾಲಕ್ರಮೇಣ ಭಾರತೀಯ ಸೈನ್ಯ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇದ್ದು, ಅವಕಾಶದಿಂದ ವಂಚಿತರಾದವರು, ಗೃಹರಕ್ಷಕ ಸೇರಿದರೆ ಸೈನಿಕ, ಪೊಲೀಸರಂತೆ ಕೆಲಸ ಮಾಡಬಹುದು ಎಂಬ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಗೃಹರಕ್ಷಕ ದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಎಂದರು.
ಗೃಹರಕ್ಷಕ ದಳದಲ್ಲಿ ಹೆಚ್ಚಿನ ಶಿಸ್ತು ಅಗತ್ಯವಿದೆ. ಪ್ರತಿ ವಾರದ ಪರೇಡ್ ತರಬೇತಿಯಲ್ಲಿ ಭಾಗವಹಿಸಿ, ಶ್ರದ್ಧೆ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಪೊಲೀಸರಂತೆ ಗೃಹರಕ್ಷಕರು ಖಾಕಿ ಸಮವಸ್ತ್ರದೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಸಮವಸ್ತ್ರದಲ್ಲಿದ್ದಾಗ ಶಿಸ್ತು, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟದ ವಿಚಾರದಲ್ಲಿ ಗೃಹ ರಕ್ಷಕರಿಗೆ ಹೆಚ್ಚಿನ ಜವಬ್ದಾರಿ ಇದೆ ಅದನ್ನು ಶ್ರದ್ದೆಯಿಂದ ಪಾಲಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಭಾರತದ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಈ ಸಂಧರ್ಭದಲ್ಲಿ ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ,ಹೊಸನಗರ ಅಬಕಾರಿ ವೃತ್ತ ನಿರೀಕ್ಷಕ ನಾಗರಾಜ್ , ವಿಶೇಷ ಉಪನ್ಯಾಸಕರಾದ ಡಾ. ಸುಚಿತ್ರ , ತರಬೇತುದಾರರಾದ ಗಿರಿರಾಜ್ ರಿಪ್ಪನ್ ಪೇಟೆ ಪಿಎಸ್ಐ ರಾಜುರೆಡ್ಡಿ ಇದ್ದರು.