ದಿವ್ಯಾಂಗ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಪ್ರಕರಣದ ದಿಕ್ಕನ್ನೇ ಬದಲಿಸಿದ FSIL ರಿಪೋರ್ಟ್
ರಾಮನಗರ ತಾಲೂಕಿನ ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯ ಖುಷಿ ಸಾವಿನ ಪ್ರಕರಣಕ್ಕೆ ಇದೀಗ ಭಾರೀ ಟ್ವಿಸ್ಟ್ ಸಿಕ್ಕಿದೆ. ಎಫ್ಎಸ್ಎಲ್ ವರದಿ ಬಂದಿದ್ದು, ಬಾಲಕಿಯ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ.
ಕಳೆದ ನಾಲ್ಕೈದು ದಿನಗಳಿಂದ 14 ವರ್ಷದ ಬಾಲಕಿ ಖುಷಿ ಎಂಬಾಕೆಯ ಸಾವಿನ ಕುರಿತು ಪ್ರತಿಭಟನೆಗಳು ನಡೆದಿದ್ದವು.
ಬಾಲಕಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ನಾಲ್ಕು ಮಂದಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇನ್ನು ಯುಟ್ಯೂಬ್ ವ್ಲಾಗರ್ಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖುಷಿ ಸಾವಿಗೆ ನ್ಯಾಯ ಬೇಕೆಂದು ಅಭಿಯಾನ ನಡೆಸಿದ್ದರು. ಆದರೆ ಇದೀಗ ಎಫ್ಎಸ್ಎಲ್ ವರದಿ ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿಬಿಟ್ಟಿದೆ. ಅಲ್ಲದೇ ಈ ವರದಿಯಲ್ಲಿ ಖುಷಿ ದೇಹದಲ್ಲಿ ಎಲ್ಲೂ ಸಹ ಗಾಯದ ಕಲೆಗಳೂ ಸಹ ಇಲ್ಲ ಎಂದು ಉಲ್ಲೇಖಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಾಮನಗರ ಎಸ್ಪಿ ʼಬಿಡದಿಯ ಪ್ರಕರಣದ ಕುರಿತು ನಾವು ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಸುಮಾರು ಹತ್ತು ಜನರನ್ನು ವಿಚಾರಣೆಗೆ ಒಳಪಡಿಸಿದೆವು. ಆದರೆ ಯಾರೂ ಸಹ ಕೊಲೆ ಮಾಡಿಲ್ಲ. ಇದೀಗ ಎಫ್ಎಸ್ಎಲ್ ವರದಿ ಬಂದಿದೆ. ಅದರಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ. ಸದ್ಯಕ್ಕೆ ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಅದು ಬಂದ ನಂತರ ಸಾವಿಗೆ ಕಾರಣ ಏನೆಂಬುದು ತಿಳಿದುಬರಲಿದೆʼ ಎಂದರು.