ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಿಡೀರ್ ದಾಳಿ
ಅಕ್ರಮವಾಗಿ ಮರಳು (Sand) ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಳೆದ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಅಧಿಕಾರಿಗಳನ್ನು ಕಂಡು ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಆದರೆ ಜೆಸಿಬಿಯೊಂದು ಸಿಕ್ಕಿಬಿದ್ದಿದೆ.
ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿಯ ಮಾಹಿತಿ ದೊರೆತ ಹಿನ್ನೆಲೆ ಟ್ರಾಕ್ಟರ್ ಚಾಲಕ ವೇಗವಾಗಿ ಟ್ರಾಕ್ಟರ್ ನುಗ್ಗಿಸಿ ಪರಾರಿಯಾಗಿದ್ದಾನೆ. ಇದರ ಹಿಂದೆಯೇ ಬಂದ ಜೆಸಿಬಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನು, ಮರಳು ತುಂಬಿಕೊಂಡು ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು. ಮರಳು ಸಾಗಾಣೆಗೆ ಅಗತ್ಯ ದಾಖಲೆ ಇಲ್ಲದ ಹಿನ್ನೆಲೆ ಟಿಪ್ಪರ್ ಲಾರಿ ವಶಪಡಿಸಿಕೊಂಡಿದ್ದಾರೆ.