RIPPONPETE | ಉಪ್ಪಿನಕಾಯಿ ಫ್ಯಾಕ್ಟರಿಯ ಹೊಲಸು ನೀರು ಚರಂಡಿಗೆ – ಸಾರ್ವಜನಿಕರ ಪರದಾಟ
ರಿಪ್ಪನ್ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರದ ಸಮೀಪದಲ್ಲಿರು ಖಾಸಗಿ ಉಪ್ಪಿನಕಾಯಿ ಫ್ಯಾಕ್ಟರಿಯಿಂದ ಹೊರಬರುವ ಹೊಲಸು ನೀರು ತೆರೆದ ಚರಂಡಿಯಲ್ಲಿ ಹರಿ ಬಿಡಲಾಗಿದ್ದು ಇದರಿಂದ ದುರ್ವಾಸನೆ ಹೆಚ್ಚಿದ್ದು,ರೋಗರುಜಿನಗಳು ಹೆಚ್ಚುವ ಭೀತಿಯಲ್ಲಿ ಸುತ್ತಲಿನ ನಿವಾಸಿಗಳು ಪರದಾಡುವಂತಾಗಿದೆ.
ಹೌದು ಈ ಉಪ್ಪಿನಕಾಯಿ ಫ್ಯಾಕ್ಟರಿ ಯಿಂದ ಹೊರಬರುವ ಹೊಲಸು ನೀರಿನ ದುರ್ವಾಸನೆಯಿಂದ ಸ್ಥಳೀಯ ನಿವಾಸಿಗಳ ಗೋಳು ಹೇಳತೀರದಂತಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕೆಲವರು ತಮ್ಮ ಜೀವನ ನಿರ್ವಹಣೆಗಾಗಿ ಕ್ಯಾಂಟೀನ್ , ಪಾನಿಪುರಿ ಅಂಗಡಿಗಳನ್ನು ನಡೆಸುತಿದ್ದು ಈ ದುರ್ವಾಸನೆಯಿಂದ ಗ್ರಾಹಕರಿಲ್ಲದೇ ತಮ್ಮ ತುತ್ತಿನ ಚೀಲಕ್ಕೆ ಪರದಾಡುತಿದ್ದರೇ ಉಪ್ಪಿನಕಾಯಿ ಫ್ಯಾಕ್ಟರಿಯ ಮಾಲೀಕ ತನ್ನ ತಿಜೋರಿಯನ್ನು ತುಂಬಿಸಿಕೊಂಡು ತನಗೂ ಇದಕ್ಕೂ ಸಂಬಂಧವಿಲ್ಲದಂತೆ , ಇಂಗು ಗುಂಡಿ ತೆಗೆದು ಬಿಡಬೇಕಾದ ಹೊಲಸು ನೀರನ್ನು ನೇರವಾಗಿ ಚರಂಡಿಗೆ ಬಿಡುವ ಮೂಲಕ ನಿರ್ಲಕ್ಷ್ಯ ಮೆರೆಯುತಿದ್ದಾನೆ.
ಸ್ವಚ್ಛತಾ ಆಂದೋಲನದ ಹೆಸರಲ್ಲಿ ಆರೋಗ್ಯ ಇಲಾಖೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ ಇಂತಹ ಪ್ರದೇಶಗಳಿಗೆ ಬಂದು ಸ್ವಚ್ಛತೆ ಕಾರ್ಯಕ್ರಮದ ಜೊತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹ.
ಈ ಬಗ್ಗೆ ಮನವಿ ಸಲ್ಲಿಸಿದರೂ. ಈ ಪ್ರದೇಶಗಳ ಸ್ವಚ್ಛತೆಗೆ ಗ್ರಾಮಾಡಳಿತ ಗಮನಹರಿಸಿಲ್ಲ ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಉಪ್ಪಿನಕಾಯಿ ಫ್ಯಾಕ್ಟರಿ ಮಾಲೀಕನ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದಿಸುತ್ತಾರಾ ಕಾದು ನೋಡಬೇಕಾಗಿದೆ…..