January 11, 2026

Bankapura | ಆರೋಗ್ಯಕರ ಬದುಕಿಗೆ ಮಾದಕ ದ್ರವ್ಯ ಮಾರಕ – ಪಿಎಸ್‌ಐ ನಿಂಗರಾಜ್

ಆರೋಗ್ಯಕರ ಬದುಕಿಗೆ ಮಾದಕ ದ್ರವ್ಯ ಮಾರಕ – ಪಿಎಸ್‌ಐ ನಿಂಗರಾಜ್ 

ಮಾದಕ ದ್ರವ್ಯಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ಆರೋಗ್ಯಕರ ಬದುಕಿಗೆ ಮಾದಕ ದ್ರವ್ಯಗಳು ಮಾರಕವಾಗಿದ್ದು, ಅಂತಹ ದುಷ್ಟಟಗಳಿಂದ ದೂರವಾಗುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು ಎಂದು ಬಂಕಾಪುರ ಪೊಲೀಸ್ ಠಾಣೆ ಪಿಎಸ್‌ಐ ನಿಂಗರಾಜ್ ಕೆ ವೈ ಹೇಳಿದರು.


ತಾಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಬಂಕಾಪುರ ಪೊಲೀಸ್ ಠಾಣೆಯಿಂದ ನಡೆದ ಅಂತರರಾಷ್ಟ್ರೀಯ ಮಾದಕ ದ್ರವ್ಯಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹದಿಹರೆಯದವರು ಮತ್ತು ಯುವಜನರಲ್ಲಿ ಸಣ್ಣ, ಸಣ್ಣ ಆಕರ್ಷಣೆ ಮಾದಕ ಸೇವನೆಯ ಪ್ರಯತ್ನ ಮಾಡಿಸುತ್ತದೆ. ಪ್ರಯತ್ನ ಚಟವಾಗಿ ಬದಲಾಗಲಿದೆ. ಒಂದು ಬಾರಿ ಮಾದಕ ವಸ್ತುಗಳ ದುಶ್ಚಟಕ್ಕೆ ಸಿಲುಕಿದರೆ, ಮಾದಕ ಜಗತ್ತು ತನ್ನ ಭ್ರಮಾ ಲೋಕಕ್ಕೆ ಸೆಳೆದುಕೊಳ್ಳುತ್ತದೆ. ಸಣ್ಣದಾಗಿ ಆರಂಭವಾದ ಚಟ ಹಂತ ಹಂತವಾಗಿ ದೊಡ್ಡದಾಗುತ್ತದೆ. ಕೆಲಸವಿಲ್ಲದ ಯುವಕರು ಹಣ ಹೊಂದಿಸಲು ಸಾಧ್ಯವಾಗದೇ, ದುಶ್ಚಟವನ್ನು ಬಿಡಲು ಸಾಧ್ಯವಾಗದೇ, ಕಳ್ಳತನ ಮತ್ತು ದರೋಡೆಗಳಂತಹ ಸಮಾಜಘಾತುಕ ಕೃತ್ಯಗಳಿಗೆ ಇಳಿಯುತ್ತಾರೆ. ಯುವಕರು ಈ ಮೋಸದ ಜಾಲಕ್ಕೆ ಸಿಲುಕುವ ಮುನ್ನ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸಮಾಜಕ್ಕೂ ಈ ದುಷ್ಕೃತ್ಯದ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.

ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಬಗೆಯ ಮಾದಕ ವಸ್ತುಗಳ ಬಳಕೆ ಮಾಡುವುದು, ಮತ್ತು ಸಾಗಣೆ ಮಾಡುವುದು ಕಂಡು ಬಂದರೇ, ಜಾಲದ ಬಗ್ಗೆ ನಿಮಗೆ ಮಾಹಿತಿ ದೊರತರೂ ಅಪರಾಧ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳ ಸಾಗಣೆಯ ಜಾಲ ತಡೆಗಟ್ಟುವ ಮೂಲಕ ಸದೃಢ ಭಾರತ ಕಟ್ಟುವ ಸಂಕಲ್ಪಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾಲೇಜು ದಿನಗಳಲ್ಲಿ ಕಾಣಿಸುವ ಕುತೂಹಲಗಳನ್ನು ಬದಿಗೊತ್ತಿ, ದುಶ್ಚಟಗಳಿಂದ ದೂರವಿರಿ. ಉತ್ತಮ ಕಲಿಕೆಯ ಕಡೆಗೆ ಗಮನ ಕೊಡಿ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಜಗತ್ತನ್ನು ಅರಿತುಕೊಳ್ಳಿ, ಸಕಾಲಕ್ಕೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಲಭಿಸಲಿದೆ. ಆಗ ಸಮಾಜವೇ ನಿಮ್ಮನ್ನು ಗೌರವಿಸಲಿದೆ ಎಂದರು.

ಉಪನ್ಯಾಸಕರಾದ ಬಿ.ಕುರಬರ, ಎಂ.ಆರ್.ಅಶೋಕ, ಜಗದೀಶ ಪುರದ, ಗೀರೀಶ ಕುಎಂದ ವಾಡ, ಸುರೇಖಾ ಕುರಂದವಾಡ, ಎಸ್.ಬಿ.ಗೌಡರ, ಅನೀಲ ತಳವಾರ, ಪೊಲೀಸ್ ಠಾಣೆ ಸಿಬ್ಬಂದಿಯಾದ ಮಲ್ಲೇಶ ಜಾಲಗಾರ, ಸಂತೋಷ ಭಜಂತ್ರಿ, ರಮೇಶ ಅಗಸಿಬಾಗಿಲ ಸೇರಿದಂತೆ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *