ರಿಪ್ಪನ್ ಪೇಟೆ : ಇಲ್ಲಿನ ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆನವಳ್ಳಿ ಗ್ರಾಮದಲ್ಲಿ 2020 ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಗನ್ ಶಾಟ್(gunshot) ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು ಪಟ್ಟಣದ ಖಡಕ್ ಪಿಎಸ್ಐ ಪ್ರವೀಣ್ ಎಸ್ ಪಿ ಈ ಪ್ರಕರಣದ ಮರು ತನಿಖೆ ನಡೆಸುತಿದ್ದಾರೆ ಎಂದು ತಿಳಿದುಬಂದಿದೆ.
2020 ರ ಡಿಸೆಂಬರ್ನಲ್ಲಿ ಬೆನವಳ್ಳಿ ಗ್ರಾಮದ ಪ್ರವೀಣ ಎಂಬ ಯುವಕನಿಗೆ ಖಾಸಗಿ ವ್ಯಕ್ತಿಯೋರ್ವ ಗದ್ದೆಯಲ್ಲಿ ಕಟ್ಟಿದ ಕಟ್ಟುಕೋವಿಯಿಂದ ಸಿಡಿದ ಗುಂಡು ಕಾಲಿಗೆ ತಾಗಿ ಕಾಲು ಕಳೆದುಕೊಂಡಿದ್ದನು,ಈ ಪ್ರಕರಣದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ಥ ಯುವಕ ಅಂದಿನ ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಹ ಮಾಡಿಕೊಂಡಿದ್ದನು.
ಈ ಘಟನೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಪಿಎಸ್ಐ ಪ್ರವೀಣ್ ಪ್ರಕರಣದ ಮತು ತನಿಖೆಯನ್ನು ಪ್ರಾರಂಭಿಸಿದ್ದು ಕಾಲು ಕಳೆದುಕೊಂಡ ಯುವಕನಿಗೆ ನ್ಯಾಯ ದೊರಕಿಸುವ ವಿಶ್ವಾಸವಿದೆ ಎನ್ನಲಾಗುತ್ತಿದೆ.
ಘಟನೆಯ ಹಿನ್ನಲೆ :
ತನ್ನದಲ್ಲದ ತಪ್ಪಿಗೆ ಕಾಲನ್ನು ಕಳೆದುಕೊಂಡು ಸಂಕಷ್ಟಕೊಳಗಾಗಿರುವ ಯುವಕನ ಗೋಳು ಕೇಳುವರಿಲ್ಲದೇ ಪರಿತಪಿಸುತ್ತಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯತಿಯ ಬೆನವಳ್ಳಿ ಗ್ರಾಮದಲ್ಲಿ ಆ ದಿನ ನಡೆದೇ ಹೋಗಿತ್ತು.
ಬಡ ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಹಾಗೂ ದೊಡ್ಡ ಮಗ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಹೋಗಿದ್ದರು.ಈಗ ಇರುವ ಒಬ್ಬ ಮಗನು ಕಾಲು ಕಳೆದುಕೊಂಡು ಮನೆಯಲ್ಲೇ ಇರುವುದರಿಂದ ಕುಟುಂಬವೇ ಬೀದಿಗೆ ಬಿದ್ದಿತ್ತು.
ಡಿಸೆಂಬರ್10 ರ ರಾತ್ರಿ ತನ್ನ ಮನೆಯ ಜಾನುವಾರು ಬಂದಿಲ್ಲ ಎಂದು ತನ್ನ ಹೊಲಕ್ಕೆ ಹೋದ ಪ್ರವೀಣನಿಗೆ ಪಕ್ಕದ ಜಮೀನಿನ ಮಾಲೀಕರು ಕಾಡು ಪ್ರಾಣಿಗಳ ಬೇಟೆಗೆ ಬೇಲಿ ಬದಿಯಲ್ಲಿ ಕಟ್ಟುಕೋವಿಯನ್ನು ಕಟ್ಟಿದ್ದು ಅದರಿಂದ ಸಿಡಿದ ಗುಂಡಿನಿಂದ ಯುವಕನ ಕಾಲು ಛಿದ್ರವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದನು ನಂತರ ಅರೆಪ್ರಜ್ನೆಗೆ ಬಂದಾಗ ಯುವಕನ ಬಲಗಾಲು ತುಂಡಾಗಿ ಜೋತಾಡುತ್ತಿದ್ದು,ಗುಂಡು ಸಿಡಿದ ಸ್ಥಳವನ್ನು ಗಮನಿಸಿದಾಗ ಅಲ್ಲಿ ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಕಟ್ಟುಕೋವಿ ಕಂಡುಬರುತ್ತದೆ.ಅದಾದ ನಂತರ ಅರೆ ಪ್ರಜ್ಞಾಸ್ಥಿತಿಯಲ್ಲಿ ಪ್ರವೀಣ ತನ್ನ ಸ್ನೇಹಿತನಿಗೆ ಕರೆಮಾಡಿ ಘಟನೆ ಕುರಿತು ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ನೇಹಿತರು ಚಿಕಿತ್ಸೆಗಾಗಿ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಾರೆ.
ತೀವ್ರತರವಾದ ಗಾಯವಾದ ಹಿನ್ನಲೆಯಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿದ ಕಾರಣ ವೈದ್ಯರ ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.ಅಲ್ಲೂ ಸಹ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಊರಿನವರೆಲ್ಲಾ ಸೇರಿ ಹಣ ಸಂಗ್ರಹಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಣಿಪಾಲ್ ವೈದ್ಯರು ಗುಂಡಿನ ಹೊಡೆತದ ತೀವ್ರತೆಯನ್ನು ಗಮನಿಸಿ ಕಾಲು ಕತ್ತರಿಸಲೇ ಬೇಕು ಎಂದು ಸಲಹೆ ನೀಡಿ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಪ್ರವೀಣನ ಬಲಗಾಲನ್ನು ಮೊಣಕಾಲಿಂದ ಮೇಲೆ ಕತ್ತರಿಸುತ್ತಾರೆ. ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಬಂದು ಪರೀಶೀಲಿಸಿ ಯುವಕನಿಂದ ಮಾಹಿತಿ ಪಡೆದುಕೊಂಡಿರುತ್ತಾರೆ.
ಸ್ವಲ್ಪ ಗುಣಮುಖನಾಗಿ ನಂತರ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ಬಂದು ಪ್ರಕರಣದ ಕುರಿತು ವಿಚಾರಿಸಿದಾಗ ತಾನು ನೀಡಿದ ದೂರಿನ ಆರೋಪಿಗಳ ಮೇಲೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂದಿನ ಪಿಎಸ್ಐ ಯಾವುದೇ ಪ್ರಕರಣ ದಾಖಲಿಸದೇ ಇರುವುದು ಯುವಕನಿಗೆ ಗೊತ್ತಾಗುತ್ತದೆ.ಈ ಬಗ್ಗೆ ವಿಚಾರಿಸಿದಾಗ ಅಂದಿನ ಪಿಎಸ್ಐ ಸಂತ್ರಸ್ತ ಯುವಕನಿಗೆ ಬೆದರಿಸಿ ಕಳುಹಿಸುತ್ತಾರೆ ಎಂದು ಸಂತ್ರಸ್ತ ಯುವಕ ತನ್ನ ಅಳಲು ತೋಡಿಕೊಳ್ಳುತ್ತಾನೆ.
ಈಗ ಅಂದಿನ ಪಿಎಸ್ಐ ಪಾರ್ವತಿ ಬಾಯಿ ಈ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಸಂತ್ರಸ್ತ ಪ್ರವೀಣ್ ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ರವರನ್ನು ಗ್ರಾಮಸ್ಥರ ಸಹಕಾರದೊಂದಿಗೆ ನೇರವಾಗಿ ಭೇಟಿಯಾಗಿ ತಪ್ಪಿತಸ್ಥ ಆರೋಪಿಗಳು ಹಾಗೂ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ತನಗೆ ಸೂಕ್ತ ಪರಿಹಾರ ದೊರಕಿಸಕೊಡಬೇಕೆಂದು ಮನವಿ ಮಾಡಿದ್ದನು
ಒಟ್ಟಾರೆಯಾಗಿ ಸಂತ್ರಸ್ತ ಯುವಕನಿಗೆ ಸೂಕ್ತವಾದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತನಿಖೆಯನ್ನು ಕೈಗೊಂಡಿರುವ ಪಿಎಸ್ಐ ಕಾರ್ಯ ಶ್ಲಾಘನೀಯವಾಗಿದೆ.