ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಯುವಕರು ಸಾವು, ಓರ್ವ ಗಂಭೀರ|Accident

ಎರಡು ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ಸಾಗರ ತಾಲೂಕಿನ ಹೊಸಂತೆ ಗೌತಮಪುರ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.




ಚನ್ನಾಪುರದ ಪ್ರಮೋದ್(23) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸಿಫ್(21) ಎಂಬವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 


ಪ್ರಮೋದ್ ತನ್ನ ಅಜ್ಜಿ 70 ವರ್ಷದ ದೇವಮ್ಮರನ್ನು ತ್ಯಾಗರ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಇವರು ಸಂಚರಿಸುತ್ತಿದ್ದ ಬೈಕ್ ಶಿವಮೊಗ್ಗದಿಂದ ಹೊಸಂತೆಗೆ ಬರುತ್ತಿದ್ದ ಆಸಿಫ್ ಅವರ ಬೈಕ್‍ ಮುಖಾಮುಖಿ ಢಿಕ್ಕಿಯಾಗಿದೆ. ಆಸಿಫ್ ಬೈಕಿನಲ್ಲಿದ್ದ ಶಿವಮೊಗ್ಗದ ತೌಸೀಫ್(20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.




ದೇವಮ್ಮರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಮಾಜಿ ಶಾಸಕ ಬೇಳೂರು ಭೇಟಿ:


ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಸಾಗರ ಸರ್ಕಾರಿ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ತಕ್ಷಣದಲ್ಲಿ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಸ್ವಗೃಹಕ್ಕೆ ಕಳಿಸಿಕೊಡುವಂತೆ ಆಸ್ಪತ್ರೆಯ  ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

 ಈ ಸಂದರ್ಭದಲ್ಲಿ ಕುಟುಂಬದವರ ಹಾಗೂ ಸಂಬಂಧಿಕರು ಮತ್ತು ಗ್ರಾಮಸ್ಥರು ಜೊತೆಗಿದ್ದರು…





ಯುವಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ :

ಹೊಸ ವರ್ಷದ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆತುರ ಬೇಡ ಯುವಕರೇ…..

ನಮ್ಮ ಮಲೆನಾಡಿನಲ್ಲಿ ಕಳೆದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳಿಂದ ಸಾಕಷ್ಟು ಯುವಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿ ಕೆಲವರು ಮೃತಪಟ್ಟರೆ ಇನ್ನು ಕೆಲವರು ಮದ್ಯಪಾನ ಮಾಡಿ ಅಪಘಾತವೆಸಗಿ ತಾವು ಬಲಿಯಾಗುವುದಲ್ಲದೆ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ.

ಅಂಕಿ ಅಂಶಗಳ ಅಂದಾಜಿನ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವವರು ಬಹುಪಾಲು ಸಂಖ್ಯೆಯಲ್ಲಿ ಯುವಕರೇ ಆಗಿದ್ದಾರೆ. ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿರುವವರಲ್ಲಿ ಹೆಚ್ಟಿನವರು 18 ರಿಂದ 30 ವರ್ಷದೊಳಗಿನವರಾಗಿದ್ದಾರೆ. ಕೆಲವು ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ವಾಹನಗಳನ್ನು ಚಲಾಯಿಸಲು ಕೊಟ್ಟು ತಪ್ಪುಮಾಡುತ್ತಿದ್ದಾರೆ. ಇವರು ತಾವು ಬಲಿಯಾಗುವುದಲ್ಲದೆ ಬೇರೆಯವರನ್ನೂ ಬಲಿತೆಗೆದುಕೊಳ್ಳುತ್ತಿದ್ದಾರೆ. 




ಹೆಚ್ಚಿನ ರಸ್ತೆ ಅಪಘಾತಗಳಲ್ಲಿ ತಮ್ಮ ತಪ್ಪಿಲ್ಲದಿದ್ದರೂ ಬೇರೆ ಯಾರೋ ಮಾಡಿದ ತಪ್ಪಿಗೆ ಅಮಾಯಕ ಮುಗ್ಧ ಜೀವಗಳು ಬಲಿಯಾಗುತ್ತಿವೆ. ನಶೆಯಲ್ಲಿ ತೇಲಾಡುವವರಿಗೆ ತಾನು ರಸ್ತೆಯ ಮೇಲೆ ಸಂಚರಿಸುತ್ತಿಲ್ಲ ಆಕಾಶದಲ್ಲಿ ತೇಲಾಡುತ್ತಿದ್ದೆನೆಂಬ ಭ್ರಮೆ ಇರುವುದರಿಂದಲೇ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ.ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸದಿದ್ದಲ್ಲಿ ಏನೆಲ್ಲಾ ಅನಾಹುತಗಳು ಜರುಗಬಹುದು ಎಂಬುದನ್ನು ನಾವೆಲ್ಲಾ ಪ್ರತಿನಿತ್ಯ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದೇವೆ. ಆದರೆ ಪಾಲಿಸುತ್ತೇವೆಯೇ? ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಹೇಳಿಕೆಗಳು ಲಂಚದ ಮುಂದೆ ಬಲಕಳೆದುಕೊಳ್ಳುತ್ತದೆ.

ಯುವಕರೇ, ನಿಧಾನವಾಗಿ ವಾಹನ ಚಾಲನೆ ಮಾಡಿದರೆ ನಿಮ್ಮ ನಿಗದಿತ ಸ್ಥಳಕ್ಕೆ ತಲುಪಲು ಸ್ವಲ್ಪ ತಡವಾಗಬಹುದು.ಆದರೆ ನಿಮ್ಮನ್ನು ಸಾಕಿ ಸಲುಹಿದ ಪೋಷಕರು ಕಣ್ಣಿರು ಹಾಕುವುದನ್ನು ತಪ್ಪಿಸುವುದಕ್ಕಾದರು ನಿಧಾನವಾಗಿ ಚಲಾಯಿಸಿ. ಜೀವಕ್ಕಿಂತ ಯಾವುದೂ ಮುಖ್ಯವಲ್ಲವೆಂಬುದು ನಿಮಗೆ ಅರಿವಿರಲಿ.

ಪ್ರತಿ ಹೊಸ ವರ್ಷದ ಸಮಯದಲ್ಲಿ ಅನಾಹುತಗಳು ನಡೆಯುವುದನ್ನು ಹಲವಾರು ವರ್ಷಗಳಿಂದ ನೋಡುತಿದ್ದೇವೆ. ದಯವಿಟ್ಟು ನಿಧಾನವಾಗಿ ಸುರಕ್ಷಿತವಾಗಿ ವಾಹನ ಚಲಾಯಿಸಿ ಏಕೆಂದರೆ ಸಮಾಜಕ್ಕೆ ನಿಮ್ಮ ಸಾವು ಒಂದು ಸುದ್ದಿ ಅಷ್ಟೇ.. ಆದರೆ ನಿಮ್ಮ ಕುಟುಂಬಕ್ಕೆ ಅದರಲ್ಲೂ ನಿಮ್ಮ ಹೆತ್ತು ಹೊತ್ತವರಿಗೆ ಅದೊಂದು ಆಘಾತ….. 

ದಯವಿಟ್ಟು ಆಲೋಚಿಸಿ ವಾಹನ ಚಲಾಯಿಸುವಂತೆ ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ……



Leave a Reply

Your email address will not be published. Required fields are marked *