ವರದಕ್ಷಿಣೆ ಕಿರುಕುಳ, ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ : ಗಂಡನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲು

 ವರದಕ್ಷಿಣೆ ಕಿರುಕುಳ ತಾಳದೇ ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಗಾನವಿ(27) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಪತಿಯ ಕುಟುಂಬಸ್ಥರ ವಿರುದ್ಧ ಗಾನವಿ ಪೋಷಕರು ಆರೋಪಿಸಿದ್ದಾರೆ.ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಯುಗಾದಿ ಹಬ್ಬ. ಹೊಸ ವರ್ಷದ ಸಂಭ್ರದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನೊಂದ ನವವಿವಾಹಿತೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ತರುವಂತೆ ಪೀಡಿಸಿ ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಗಾನವಿ ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ನಿಂದ ಕೃತ್ಯ ಶಂಕೆ ವ್ಯಕ್ತವಾಗಿದೆ.

>ನಂದೀಪ್ ಹಾಗೂ ಗಾನವಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮದುವೆಯಾದ ಬಳಿಕ ಅನೇಕ ಬಾರಿ ಹಣ ತರುವಂತೆ ನಂದಿತ್ ದೈಹಿಕ ಕಿರುಕುಳ ನೀಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಮೃತ ಗಾನವಿ ತಂದೆ ಲೋಕಪ್ಪಗೌಡ ಇತ್ತೀಚೆಗಷ್ಟೇ 2 ಲಕ್ಷ ಹಣ ನೀಡಿದ್ದರು. ಆದರೂ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಗಾನವಿ ತನ್ನ ಮೇಲೆ ಹಲ್ಲೆ ಮಾಡಿರುವ, ಬೈದಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ರೀತಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ತಿಳಿದ ನಂತರ ಕೋಪಿತಗೊಂಡ ಗಂಡ ಗಾನವಿಗೆ ವಿಷ ಕುಡಿಸಿ ಕೊಲೆಗೈದಿದ್ದಾರೆ ಎಂದು ಗಾನವಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *