ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಭಾನುವಾರ ಮುಂಜಾನೆ ಸಂಚರಿಸುತ್ತಿದ್ದ ಕಾರನ್ನು ಅದರ ಚಾಲಕ ಬೆಂಗಳೂರು ನಿವಾಸಿ ಸುರೇಶ್ ನಾವಡ (43) ಅವರು ಯಾವುದೋ ಶಬ್ದ ಕೇಳಿದ್ದಕ್ಕಾಗಿ ರಸ್ತೆಯಲ್ಲಿ ನಿಲ್ಲಿಸಿ ನೋಡುತ್ತಿದ್ದ ವೇಳೆ ಮರವೊಂದು ಕಾರಿನ ಮೇಲೆ ಹಠಾತ್ ಆಗಿ ಬಿದ್ದ ಪರಿಣಾಮ ಚಾಲಕ ಸುರೇಶ್ ನಾವಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಸುರೇಶ್ ನಾವಡ ಅವರು ಬೆಂಗಳೂರು ಐಬಿಎಂ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಡಿಸೆಂಬರ್ 23 ರಂದು ಪತ್ನಿ ಮಕ್ಕಳೊಂದಿಗೆ ತಾಯಿ ಮನೆಯಾದ ಪಾವಂಜೆಗೆ ಬಂದಿದ್ದು, ಭಾನುವಾರ ಮುಂಜಾನೆ 5.30 ರ ವೇಳೆಗೆ ಗಂಟೆಗೆ ಮರಳಿ ಬೆಂಗಳೂರಿಗೆ ತೆರಳಲು ಪಾವಂಜೆಯಿಂದ ತನ್ನ ಕೆ.ಎ 41 ಎನ್ 6613 ನೋಂದಣಿ ಸಂಖ್ಯೆಯ ಐ20 ಕಾರಿನಲ್ಲಿ ಹೊರಟಿದ್ದು, ಬೆಳಿಗ್ಗೆ ಸುಮಾರು 7-20 ರವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ತಲುಪಿದಾಗ ಏನೋ ಒಂದು ಶಬ್ದ ಕೇಳಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರಿನಿಂದ ಇಳಿಯುತ್ತಿರುವ ಸಮಯ ರಸ್ತೆ ಬದಿಯ ಅಭಯಾರಣ್ಯದಿಂದ ಒಂದು ಮರವು ಅವರ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.