ರಿಪ್ಪನ್ ಪೇಟೆ :ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯುವಜನರು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದುಶ್ಚಟಗಳಿಂದ ದೂರ ಇರಬೇಕೆಂದು ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಶ್ರೀ ಯೋಗೇಂದ್ರ ಶ್ರೀಗಳು ಹೇಳಿದರು.
ಕಾರ್ತಿಕೇಯ ಕ್ಷೇತ್ರದಿಂದ ರಿಪ್ಪನ್ಪೇಟೆ ಸಮೀಪದ ಕಲ್ಲುಹಳ್ಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಕಾರ್ತಿಕೇಯ ಕಪ್-೨೦೨೧ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ಇಂದಿನ ಯುವ ಸಮೂಹ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ.
ಕ್ರೀಡೆಗಳು ಸೋಲು ಗೆಲುವಿನ ಪಾಠವನ್ನು ಕಲಿಸುವುದರ ಜೊತೆಗೆ ಯುವ ಸಮುದಾಯದಲ್ಲಿ ಶಿಸ್ತಬದ್ಧ ಜೀವನವನ್ನು ರೂಪಿಸುತ್ತವೆ. ಕನ್ನಡ ಸಿನಿಮಾರಂಗದ ಮಹಾನ್ ಕಲಾವಿದ ಹಾಗೂ ಸಮಾಜ ಸೇವಕ ಪುನೀತ್ ರಾಜ್ಕುಮಾರ್ ಯುವಜನರಿಗೆ ಒಂದು ಆದರ್ಶವಾಗಿದ್ದಾರೆ. ಈ ಕಾರಣದಿಂದ ಈ ಗ್ರಾಮಾಂತರ ಪ್ರದೇಶದಲ್ಲಿ ಈ ಕ್ರಿಡಾಕೂಟ ಆಯೋಜಿಸಲಾಗಿದೆ ಎಂದು ಶ್ರೀಗಳು ಹೇಳಿದರು.
ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರ ದೇಗುಲದ ಧರ್ಮದರ್ಶಿಗಳಾದ ಡಾ.ಎಸ್.ರಾಮಪ್ಪ ಅವರು ಮಾತನಾಡಿ, ಪುನೀತ್ ರಾಜ್ ಕುಮಾರ್ರವರು ಕನ್ನಡ ಸಿನಿಮಾ ಜಗತ್ತಿನಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಒಂದು ಶಕ್ತಿಯಾಗಿದ್ದರು. ಅವರು ಮಾಡಿದ ಕೆಲಸ ಯುವಜನರಿಗೆ ಸ್ಫೂರ್ತಿದಾಯಕವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಯುವಜನರು ಹೆಚ್ಚು ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಆರೋಗ್ಯವಾಗಿ ಚಟುವಟಿಕೆಯಿಂದ ಇರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸನಗರ ಎ ಪಿ ಎಂ ಸಿ ಸದಸ್ಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ವಕೀಲರಾದ ಎನ್.ಪಿ.ಧರ್ಮರಾಜ್, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಭವಾನಿ ದಿವಾಕರ್,ರಾಜೇಶ್ ಬುಕ್ಕಿವರೆ,ವೀರೇಶ್, ರಘುಪತಿ,ಈಶ್ವರಪ್ಪ ಗೌಡ್ರು ಸೇರಿದಂತೆ ಅನೇಕ ಮುಖಂಡರು. ಕ್ಷೇತ್ರದ ಭಕ್ತರು ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಕ್ರೀಡಾ ತಂಡದವರು ಭಾಗವಹಿಸಿದ್ದರು.