Headlines

ಅಡಿಕೆ ಸಸಿಗಳನ್ನು ನಾಶಗೊಳಿಸಿದ ಅರಣ್ಯಾಧಿಕಾರಿಗಳು ,ರೈತರ ಆಕ್ರೋಶ – ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ

ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸ.ನಂ. 30 ರಲ್ಲಿನ ಆರಣ್ಯ ಪ್ರದೇಶದಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾದೀನಾನುಭವದಲ್ಲಿ ಜಮೀನು ಸಾಗುವಳಿ ಮಾಡುತ್ತಿರುವ ರೈತರ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ತಿಳಿವಳಿಕೆ ನೀಡದೆ ಏಕಾಏಕಿ ನಾಶಗೊಳಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆಂದು ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು.

ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸರ್ವೇ ನಂ 30 ರಲ್ಲಿ ಅರಣ್ಯ ಇಲಾಖೆಯವರು ಅಡಿಕೆ ಸಸಿಗಳನ್ನು ಕಿತ್ತು, ಕಡಿದು ಹಾಕಿದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ 2015 ರಿಂದ ಸಾಗುವಳಿ ಮಾಡಿರುವ ರೈತರನ್ನು ತೆರವುಗೊಳಿಸಬಾರದಂದೆ ನಿಯಮ ಜಾರಗೊಳಿಸಲಾದರೂ ಕೂಡಾ ಅಧಿಕಾರಿಗಳು ಉಡಾಫೆಯಿಂದ ಇಂತಹ ಕೃತ್ಯದಲ್ಲಿ ತೊಡಗಿರುತ್ತಾರೆ. ಅರಣ್ಯ ರಕ್ಷಕನಿಗೆ ವರ್ಷಕ್ಕೆ ಖೇಣಿ ಕೊಡಬೇಕಂತೆ ಆತನನ್ನು ತಕ್ಷಣ ಇಲ್ಲಿಂದ ಬದಲಾವಣೆ ಮಾಡುವ ಮೂಲಕ ಅಮಾನತು ಪಡಿಸುವಂತೆ ಶಾಸಕರು ಹಿರಿಯ ಆಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

ಕೊಳವಳ್ಳಿ ಸ.ನಂ. 30 ರಲ್ಲಿ ಈ ಹಿಂದೆಯೇ ನೂರಾರು ರೈತರು ಸಾಗುವಳಿ ಮಾಡಿಕೊಂಡು ಮಂಜೂರಾತಿಗೆ ಅರ್ಜಿ ಸಲ್ಲಿಸಲಾಗಿದ್ದು ಇದರಲ್ಲಿ ಎರಡ್ಮೂರು ಜನರಿಗೆ ಈ ಜಮೀನಿನಲ್ಲಿ ಸಾಗುವಳಿ ಪತ್ರವನ್ನು ನೀಡಲಾಗಿ ಉಳಿದವರು ತಮ್ಮ ತಂದೆ, ಅಜ್ಜನವರ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇಂತಹ ಉಡಾಫೆಯ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದಿಂದ ಬಡಪಾಯಿ ರೈತರು ಜಮೀನು ಇಲ್ಲದೆ ಬದುಕುವುದೇ ದುಸ್ಥರವಾಗಿದೆ ಎಂದು ಕಳವಳ ವ್ಯಕ್ತಪಡಿಸಿ, ಶಾಸನ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಿ ಅಂತಹ ಬೇಜವಾಬ್ದಾರಿ ನೌಕರನ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸುವುದಾಗಿ ರೈತರಿಗೆ ಧೈರ್ಯ ತುಂಬಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್‌ ಸ್ವಾಮಿರಾವ್, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ ಆಲವಳ್ಳಿ, ಗಿರೀಶ ಜಂಬಳ್ಳಿ, ಕಲ್ಲೂರು ನಾಗೇಂದ್ರ, ಗುಂಡಣ್ಣ, ವಿಶ್ವನಾಥ ಮೂಗುಡ್ತಿ, ಹುಳಿಗದ್ದೆ ದೇವು, ಗಂದ್ರಳ್ಳಿ ವಿಶ್ವನಾಥ, ಟಿ.ಡಿ. ಸೋಮಶೇಖರ, ಹೆದ್ದಾರಿಪುರ ಗ್ರಾಮ ಪಂಚಾಯಿತ್ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹಾಜರಿದ್ದರು.