ಮಹಿಳೆಯ ಮಾಂಗಲ್ಯ ಸರ ಕಿತ್ತು ಬೈಕ್ ನಲ್ಲಿ ಪರಾರಿಯಾದ ಕಳ್ಳರು
ಶಿವಮೊಗ್ಗ:ಮಾದೇಶ್ವರ ದೇವಸ್ಥಾನದ ರಸ್ತೆಯ ಮೂಲಕ ವೀರಾಪುರಕ್ಕೆ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದ ವೇಳೆ ಗೃಹಿಣಿಯ ಮಾಂಗಲ್ಯ ಸರವನ್ನು ಇನ್ನೊಂದು ಬೈಕಿನಲ್ಲಿ ಬಂದ ಯುವಕರಿಬ್ಬರು ಕಿತ್ತು ಪರಾರಿಯಾದ ಘಟನೆ ಭದ್ರಾವತಿಯಿಂದ ವರದಿಯಾಗಿದೆ.
ಭದ್ರಾವತಿಯ ನ್ಯೂ ಕಾಲೋನಿಯಲ್ಲಿ ವಾಸವಾಗಿರುವ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹಿರಿಯೂರು ವೀರಾಪುರದ ಹನುಮಂತೇಗೌಡ ಎನ್ನುವವರು ಬೈಕ್ ನಲ್ಲಿ ಪತ್ನಿ ಜೊತೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುವಾಗ ಬೈಪಾಸ್ ಬಳಿ ಹನುಮಂತೆ ಗೌಡ ವಾಹನವನ್ನು ನಿಧಾನ ಗೊಳಿಸುತ್ತಿದ್ದಂತೆ ಬೈಕ್ ನ ಹಿಂಬದಿಯಿಂದ ಇನ್ನೊಂದು ಬೈಕಿನಲ್ಲಿ ಬಂದ ಯುವಕರಿಬ್ಬರು ಗೌಡರ ಪತ್ನಿಯ ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನಾಭರಣವನ್ನು ಎಳೆದೊಯ್ದಿದ್ದಾರೆ.
ತಾಳಿ ಸರದ ಬೆಲೆ 1.75.000/-ರೂ. ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.