ರಿಪ್ಪನ್ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ
Thirthahalli DySP Dr. Bhanuprakash urges Rippanpete residents to celebrate Ganeshotsava peacefully within the legal framework. Strict ban on DJs and single-window clearance for pandal permissions announced.
ರಿಪ್ಪನ್ಪೇಟೆ: ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಸರ್ವ ಜನಾಂಗವನ್ನು ಒಗ್ಗೂಡಿಸುವ ವೇದಿಕೆಯಾಗಿ ಗಣೇಶೋತ್ಸವ ಮೂಡಿಬರಬೇಕು. ಕಾನೂನು ಚೌಕಟ್ಟಿನೊಳಗೆ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆಗೆ ಹೆಸರಾದ ರಿಪ್ಪನ್ಪೇಟೆಯು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ತೀರ್ಥಹಳ್ಳಿ ಡಿವೈಎಸ್ಪಿ ಡಾ. ಭಾನುಪ್ರಕಾಶ್ ಮನವಿ ಮಾಡಿದ್ದಾರೆ.
ಸ್ಥಳೀಯ ಜಿ.ಎಸ್.ಬಿ. ಕಲ್ಯಾಣ ಮಂದಿರದಲ್ಲಿ ಮುಂಬರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ‘ಪೊಲೀಸ್ ಶಾಂತಿ ಸಮಿತಿ ಸಭೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿಬಾಲಗಂಗಾಧರನಾಥ ತಿಲಕರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಎಲ್ಲ ಸಮಾಜವನ್ನು ಸಂಘಟಿಸುವ ಸದುದ್ದೇಶದಿಂದ ಗಣೇಶೋತ್ಸವವನ್ನು ಹುಟ್ಟುಹಾಕಿದರು. ಅದೇ ಹಾದಿಯಲ್ಲಿ ನಾವಿಂದು ಸಾಗಬೇಕಿದೆ. ರಿಪ್ಪನ್ಪೇಟೆ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ಈ ಸೌಹಾರ್ದತೆಯನ್ನು ಉಳಿಸಿಕೊಂಡು, ಸಾಂಸ್ಕೃತಿಕವಾಗಿ ಹಾಗೂ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿ ಎಂದು ಸಂಘಟಕರಿಗೆ ಕಿವಿಮಾತು ಹೇಳಿದರು.
“ಪೊಲೀಸರು ಕೂಡ ನಿಮ್ಮಂತೆಯೇ ಮನುಷ್ಯರು ಖಾಕಿ ತೊಟ್ಟ ಮಾತ್ರಕ್ಕೆ ಮಾನವೀಯತೆ ಇಲ್ಲ ಎಂದಲ್ಲ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಅನಿವಾರ್ಯತೆ ನಮಗಿರುತ್ತದೆ. ಸಾರ್ವಜನಿಕರು ಸ್ನೇಹಬಾಂಧವ್ಯದಿಂದ ಇಲಾಖೆಯೊಂದಿಗೆ ಸಹಕರಿಸಬೇಕು,” ಎಂದು ಅವರು ಕೋರಿದರು.
ಸುಪ್ರೀಂಕೋರ್ಟ್ ಆದೇಶದನ್ವಯ ಕರ್ಕಶ ಶಬ್ದ ಮಾಡುವ ಡಿಜೆ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ನಿಯಮಾನುಸಾರ ಧ್ವನಿವರ್ಧಕ ಬಳಸಲು ಅವಕಾಶವಿದೆ. 10 ಗಂಟೆಯ ನಂತರ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು. ಇದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮೀಯರ ವಿರುದ್ಧ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹೊಸನಗರ ತಹಶೀಲ್ದಾರ್ ಭರತ್ರಾಜ್ ಮಾತನಾಡಿ, “ಮಲೆನಾಡಿನ ಜನರು ಮೂಲತಃ ಶಾಂತಿಪ್ರಿಯರು. ಗಣೇಶ ಪ್ರತಿಷ್ಠಾಪನೆಯ ಪರವಾನಗಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸ್ಥಳೀಯವಾಗಿಯೇ ಸಿಬ್ಬಂದಿಗಳನ್ನು ನೇಮಿಸಿ, ಏಕಗವಾಕ್ಷಿ ಮಾದರಿಯಲ್ಲಿ ಸುಲಭ ವ್ಯವಸ್ಥೆ ಕಲ್ಪಿಸಲಾಗಿದೆ,” ಎಂದು ಮಾಹಿತಿ ನೀಡಿದರು.
ಈ ಮಹತ್ವದ ಶಾಂತಿ ಸಭೆಯಲ್ಲಿ ಹೊಸನಗರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನರೇಂದ್ರ, ವೃತ್ತ ನಿರೀಕ್ಷಕ ಗೌಡರ ಗೌಡಪ್ಪ, ಪಿಎಸ್ಐ ರಾಜುರೆಡ್ಡಿ, ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧೀಂದ್ರ ಪೂಜಾರಿ ಪ್ರಮುಖರಾದ ಆರ್.ಎ. ಚಾಬುಸಾಬ್, ಎಂ. ಸುರೇಶ್ಸಿಂಗ್, ಹಸನಬ್ಬ ಬ್ಯಾರಿ, ಎಂ.ಬಿ. ಮಂಜುನಾಥ, ಸುಂದರೇಶ್, ಆಸಿಫ್ ಭಾಷಾ, ಉಬೇದುಲ್ಲಾ ಷರೀಫ್, ನಿರೂಪ್ ಕುಮಾರ್, ಟಿ.ಆರ್. ಕೃಷ್ಣಪ್ಪ, ಆರ್. ರಾಘವೇಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಅಗ್ನಿಶಾಮಕ ದಳ, ಮೆಸ್ಕಾಂ, ಕಂದಾಯ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.