Headlines

ಬಿದರಹಳ್ಳಿಯಲ್ಲಿ 824 ವರ್ಷ ಹಳೆಯ ಅಪ್ರಕಟಿತ ವೀರಗಲ್ಲು ಪತ್ತೆ

ಬಿದರಹಳ್ಳಿಯಲ್ಲಿ 824 ವರ್ಷ ಹಳೆಯ ಅಪ್ರಕಟಿತ ವೀರಗಲ್ಲು ಪತ್ತೆ

ಗೂಳಿ-ಹಸುವಿನ ಮದುವೆ ಸಂಪ್ರದಾಯದ ಅಪರೂಪದ ಉಲ್ಲೇಖ; ಇತಿಹಾಸಾಸಕ್ತರ ಗಮನ ಸೆಳೆದ ಶಾಸನ

An 824-year-old unrecorded hero stone discovered at Bidarahalli near Ripponpet reveals rare inscriptions about medieval warfare, donations, and the unique bull-cow marriage ritual practiced for unmarried warriors

ರಿಪ್ಪನ್‌ಪೇಟೆ: ಸಮೀಪದ ಬಿದರಹಳ್ಳಿಯಲ್ಲಿ ಪತ್ತೆಯಾದ ಅಪ್ರಕಟಿತ ವೀರಗಲ್ಲು ಇದೀಗ ಇತಿಹಾಸಾಸಕ್ತರು ಹಾಗೂ ಶಾಸನ ಸಂಶೋಧಕರ ಗಮನ ಸೆಳೆಯುತ್ತಿದೆ. ಗ್ರಾಮದ ಸುತ್ತಮುತ್ತ ನಡೆದ ಪರಿಶೋಧನೆಯಲ್ಲಿ ಐದು ಮಾಸ್ತಿಕಲ್ಲುಗಳು ಹಾಗೂ ಒಂದು ಅಪರೂಪದ ವೀರಗಲ್ಲು ಪತ್ತೆಯಾಗಿದ್ದು, ಈ ವೀರಗಲ್ಲು ಕ್ರಿ.ಶ. 1202ರ ಕಾಲಘಟ್ಟಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಗ್ರಾಮಸ್ಥರು ಈ ವೀರಗಲ್ಲಿಗೆ ಗುಡಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗಿದೆ.

ಹತ್ತು ಸಾಲುಗಳ ಶಾಸನ ಹೊಂದಿರುವ ಈ ವೀರಗಲ್ಲು ಹೊಸಗುಂದದ ಬೀರರಸನ ಕಾಲಕ್ಕೆ ಸೇರಿದ್ದು, ಶಾಸನದಲ್ಲಿ ಬೀರರಸನನ್ನು “ಸತ್ಯ ರತ್ನಾಕರ”, “ಸರಣಾಗತ ವಜ್ರಪಂಜರ”, “ಪರನಾರಿ ಸಹೋದರ” ಮುಂತಾದ ಬಿರುದುಗಳಿಂದ ಕೊಂಡಾಡಲಾಗಿದೆ. ಇದರಿಂದ ಆ ಕಾಲದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯ ಕುರಿತು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ.

ಸೈನ್ಯ ಎದುರಿಸಿ ವೀರಮರಣ

ಶಾಸನದ ಪ್ರಕಾರ, ಬೀರರಸನ ಸೈನ್ಯ ಸಾಗುತ್ತಿದ್ದ ಸಂದರ್ಭದಲ್ಲಿ ಸಾತಗೌಡನ ಪುತ್ರನು ಸೈನ್ಯವನ್ನು ಎದುರಿಸಿ ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ. ಆತನ ಸಾಹಸವನ್ನು ಸ್ಮರಿಸಲು ಲಕ್ಷೀತಾಯಿ ಬಿಲ್ಲಬ್ಬೆ ಗೌಡತಿ ಹಾಗೂ ಅಣ್ಣಬ್ಬೆ ಗೌಡತಿ ಎಂಬ ಮಹಿಳೆಯರು ಈ ವೀರಗಲ್ಲನ್ನು ಸ್ಥಾಪಿಸಿರುವುದು ಶಾಸನದಲ್ಲಿ ಉಲ್ಲೇಖವಾಗಿದೆ.

ವೀರನ ಸ್ಮರಣಾರ್ಥವಾಗಿ ವೀರಗಲ್ಲಿಗೆ ಪೂಜೆ ನಡೆಯುವಂತೆ ಉಂಬಳಿ ನೀಡಿದ ವಿಚಾರವೂ ಶಾಸನದಲ್ಲಿದೆ. ಜೊತೆಗೆ “ಸಾವಿರ ಖಂಡುಗ” ದಾನ ನೀಡಿದ ಉಲ್ಲೇಖವೂ ದೊರೆತಿದ್ದು, ಆ ಕಾಲದ ದಾನಧರ್ಮ ಹಾಗೂ ಆಚರಣೆಗಳ ಕುರಿತು ಅಪರೂಪದ ಮಾಹಿತಿ ಲಭ್ಯವಾಗಿದೆ.

ಗೂಳಿ-ಹಸುವಿನ ಮದುವೆ ಸಂಪ್ರದಾಯದ ದಾಖಲೆ

ಈ ಶಾಸನದ ಅತ್ಯಂತ ವಿಶೇಷ ಅಂಶವೆಂದರೆ “ಗೂಳಿ-ಕವಿಲೆಯ ಮದುವೆ” ಕುರಿತು ದೊರೆತಿರುವ ಉಲ್ಲೇಖವಾಗಿದೆ. ಯುದ್ಧದಲ್ಲಿ ಮೃತ ಪಟ್ಟ ವೀರನು ಅವಿವಾಹಿತನಾಗಿದ್ದರೆ, ಆತನ ಆತ್ಮಶಾಂತಿಗಾಗಿ ಗೂಳಿ ಮತ್ತು ಹಸುವಿನ ಮದುವೆ ಮಾಡುವ ಸಂಪ್ರದಾಯವಿದ್ದುದನ್ನು ಶಾಸನ ದಾಖಲಿಸಿದೆ.
ಇಂತಹ ಆಚರಣೆಗಳು ಆ ಕಾಲದ ಜನರ ನಂಬಿಕೆ, ಮರಣೋತ್ತರ ವಿಧಿ-ವಿಧಾನಗಳು ಹಾಗೂ ಸಾಮಾಜಿಕ ಬದುಕಿನ ಕುರಿತು ಅಮೂಲ್ಯ ಮಾಹಿತಿಯನ್ನು ನೀಡುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧಕರಿಂದ ಅಧ್ಯಯನ

ಈ ಅಪರೂಪದ ವೀರಗಲ್ಲಿನ ಅಧ್ಯಯನವನ್ನು ಶಾಸನ ತಜ್ಞ ರಮೇಶ್ ಹಿರೆಜಂಬೂರು ಅವರ ಮಾರ್ಗದರ್ಶನದಲ್ಲಿ ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ.ಎನ್. ಕೋಣಂದೂರು ನಡೆಸಿದ್ದಾರೆ.

ಪರಿಶೋಧನಾ ಕಾರ್ಯದಲ್ಲಿ ಗ್ರಾಮದ ಲಕ್ಷ್ಮಣ, ಲಿಂಗರಾಜು, ರಾಜೇಶ್, ರವಿ, ರಾಘು, ಮೋಹನ್ ಕುಮಾರ್ ಜೀವನ್, ಮಹೇಶ್ ಸೋಮಶೇಖರ್, ರೇಣುಕಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಿದರಹಳ್ಳಿಯಲ್ಲಿ ಪತ್ತೆಯಾದ ಈ ವೀರಗಲ್ಲು ಕೇವಲ ಶಾಸನವಲ್ಲ; ಅದು ಕನ್ನಡ ನಾಡಿನ ಯುದ್ಧಸಾಹಸ, ಸಾಂಸ್ಕೃತಿಕ ನಂಬಿಕೆಗಳು ಮತ್ತು ದಾನಧರ್ಮದ ಪರಂಪರೆಯನ್ನು ಸಾರುವ ಅಮೂಲ್ಯ ಐತಿಹಾಸಿಕ ದಾಖಲೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

About The Author