Former Karnataka Chief Minister B.S. Yediyurappa celebrated his 84th birthday with special prayers at Siddhivinayaka Temple in Ripponpet, as BJP leaders, workers, and supporters wished him good health and continued political strength.
84ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ | ರಿಪ್ಪನ್ಪೇಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ
ರಿಪ್ಪನ್ಪೇಟೆ: ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು 84ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ಈ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಡಿಯೂರಪ್ಪ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರಾಜಕೀಯವಾಗಿ ಇನ್ನಷ್ಟು ಶಕ್ತಿ ಲಭಿಸಲೆಂದು ವಿನಾಯಕ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಯಡಿಯೂರಪ್ಪ ಅವರ ಸಾರ್ವಜನಿಕ ಬದುಕಿನ ಸೇವೆ ಮತ್ತು ಹೋರಾಟವನ್ನು ಸ್ಮರಿಸಿದರು.
ಬಿಎಸ್ವೈ – ಐದು ದಶಕಗಳ ರಾಜಕೀಯ ಪಯಣ
ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಯಡಿಯೂರಪ್ಪ ಅವರು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾಯಕ. ಕಡುಕಷ್ಟದ ಬದುಕಿನಿಂದ ಹೊರಬಂದು ಸ್ವಂತ ಶ್ರಮದಿಂದ ರಾಜಕೀಯ ಶಿಖರ ತಲುಪಿದ ‘ಸೆಲ್ಪ್ ಮೇಡ್’ ನಾಯಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ರೈತಪರ ಹೋರಾಟಗಳು, ಬಗರ್ ಹುಕುಂ ಚಳವಳಿ ಮೂಲಕ ಜನಸಾಮಾನ್ಯರ ಮನಗೆದ್ದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1943 ಫೆಬ್ರವರಿ 27ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಯಡಿಯೂರಪ್ಪ, ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ಸಂಕಷ್ಟದ ಬದುಕು ಕಂಡವರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ವೃತ್ತಿ ಆರಂಭಿಸಿ, ಆರ್ಎಸ್ಎಸ್ ಹಿನ್ನೆಲೆಯೊಂದಿಗೆ ರಾಜಕೀಯ ಪ್ರವೇಶ ಮಾಡಿದರು. ಶಿಕಾರಿಪುರದಿಂದ ಆರು ಬಾರಿ ಶಾಸಕರಾಗಿ, ವಿರೋಧಪಕ್ಷದ ನಾಯಕ, ಉಪಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯವನ್ನು ಮುನ್ನಡೆಸಿದ ಅವರು, 75 ವರ್ಷ ಮೀರಿದ ಬಳಿಕ ಸ್ವಯಂ ರಾಜೀನಾಮೆ ನೀಡಿ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸಿದ ನಾಯಕರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 17 ಸ್ಥಾನಗಳ ಗೆಲುವಿನಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
84ನೇ ವಯಸ್ಸಿನಲ್ಲೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಯಡಿಯೂರಪ್ಪ ಅವರಿಗೆ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಹಾರೈಸಿದ್ದಾರೆ.
ಬಿಎಸ್ವೈ ರಾಜಕೀಯ @50
1- ಯಡಿಯೂರಪ್ಪ ನಾಲ್ಕು ಭಾರಿ ಕರ್ನಾಟಕದ ಸಿಎಂ ಆಗಿ ಆಳ್ವಿಕೆ ನಡೆಸಿದವರು.
2- 1943, ಫೆ. 27 ರಂದು ಮಂಡ್ಯ ಜಿ. ಕೆ.ಆರ್.ಪೇಟೆ ತಾ. ಬೂಕನಕೆರೆ ಗ್ರಾಮದಲ್ಲಿ ಬಿಎಸ್ವೈ ಜನನ
3-ಬಿಎಸ್ವೈ ನಾಲ್ಕು ವರ್ಷದವರಿದ್ದಾಗಲೇ ತಾಯಿ ವಿಧಿವಶ. ಕಷ್ಟದ ಮಧ್ಯೆ ಪಿಯುಸಿ ವಿದ್ಯಾಭ್ಯಾಸ
4- 1965 ರಲ್ಲಿ ಬಿಎಸ್ವೈಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಕೆಲಸ ಸಿಕ್ಕಿತ್ತು.
5-ಶಿಕಾರಿಪುರದಲ್ಲಿ ವೀರಭದ್ರ ಶಾಸ್ತ್ರಿ ಶಂಕರ ರೈಸ್ ಮಿಲ್ ನಲ್ಲಿ ಕ್ಲರ್ಕ್ ಆಗಿ ಕೆಲಸ.
6-1967 ರಲ್ಲಿ ರೈಸ್ ಮಿಲ್ ಮಾಲೀಕರ ಮಗಳು ಮೈತ್ರಾದೇವಿ ಜೊತೆ ವಿವಾಹ
7- ಬಿಎಸ್ವೈ- ಮೈತ್ರಾದೇವಿಗೆ ರಾಘವೇಂದ್ರ, ವಿಜಯೇಂದ್ರ ಹಾಗೂ ಮೂವರು ಹೆಣ್ಣು ಮಕ್ಕಳು
8- ಬಿಎಸ್ವೈ ಕಾಲೇಜು ದಿನದಿಂದ RSS ಸ್ವಯಂಸೇವಕರಾಗಿದ್ದರು.
8-1970 ರಲ್ಲಿ ಶಿಕಾರಿಪುರದ ಆರ್ಎಸ್ಎಸ್ ಕಾರ್ಯವಾಹ( ಸೆಕ್ರೆಟರಿ ) ಆಗಿ ನೇಮಕ
9-1972 ರಲ್ಲಿ ಶಿಕಾರಿಪುರ ಟೌನ್ ಮುನ್ಸಿಪಾಲಿಟಿ ಸದಸ್ಯರಾಗಿ ಪ್ರಥಮ ಭಾರಿಗೆ ಆಯ್ಕೆ
10-1972 ರಲ್ಲಿ ಶಿಕಾರಿಪುರದ ಜನಸಂಘದ ತಾಲ್ಲೂಕು ಅಧ್ಯಕ್ಷರಾಗಿ ನೇಮಕ
11- 1975 ರಲ್ಲಿ ಶಿಕಾರಿಪುರ ಟೌನ್ ಮುನ್ಸಿಪಾಲಿಟಿ ಅಧ್ಯಕ್ಷರಾಗಿ ಆಯ್ಕೆ
12- ಎಮರ್ಜೆನ್ಸಿ ಬಳಿಕ ಬಂಧಿತರಾಗಿ ಬಳ್ಳಾರಿ, ಶಿವಮೊಗ್ಗ ಜೈಲುಗಳಲ್ಲಿದ್ದ ಬಿಎಸ್ವೈ
13- 1980 ರಲ್ಲಿ ಬಿಜೆಪಿ ಪಕ್ಷದ ಶಿಕಾರಿಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನೇಮಕ
14- 1985 ರಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ನೇಮಕ
15-1988 ರಲ್ಲಿ ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ
16- 1983ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಮೊದಲ ಭಾರಿಗೆ ಆಯ್ಕೆ
17- 1983 ರಿಂದ 6 ಭಾರಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಬಿಎಸ್ವೈ
18- 1994ರಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಬಿಎಸ್ವೈ ಆಯ್ಕೆ
19- 1999 ರ ಚುನಾವಣೆಯಲ್ಲಿ ಬಿಎಸ್ವೈಗೆ ಸೋಲು, ವಿಧಾನಪರಿಷತ್ಗೆ ಆಯ್ಕೆ
20- 2004 ರಲ್ಲಿ ಧರಂಸಿಂಗ್ ಸಿಎಂ ಆಗಿದ್ದಾಗ ವಿರೋಧಪಕ್ಷದ ನಾಯಕ
21–2006 ರಲ್ಲಿ ಕುಮಾರಸ್ವಾಮಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ, ಡಿಸಿಎಂ ಆಗಿದ್ದ ಬಿಎಸ್ವೈ
22-2007ರ ನವಂಬರ್ 12 ರಂದು ಕರ್ನಾಟಕದ ಸಿಎಂ ಆಗಿ ಬಿಎಸ್ವೈ ಪ್ರಮಾಣವಚನ ಸ್ವೀಕಾರ
23- ಕರ್ನಾಟಕದಲ್ಲಿ 7 ದಿನಗಳ ಕಾಲ ಸಿಎಂ ಆಗಿದ್ದ ಯಡಿಯೂರಪ್ಪ
24- 7 ದಿನಗಳ ಅಲ್ಪಾವಧಿಗೆ ಸಿಎಂ ಆಗಿದ್ದು ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಕೆ
25- ಬಳಿಕ ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸಿ 2008ರ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪಕ್ಷ ಸಜ್ಜು
26- 2008 ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ, ಬಂಗಾರಪ್ಪ ವಿರುದ್ಧ ಭರ್ಜರಿ ಗೆಲುವು
27- 2008ರ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ.
28-ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊದಲ ಅಧಿಕಾರದ ಗದ್ದುಗೆ , ಬಿಜೆಪಿಗೆ 110 ಕ್ಷೇತ್ರಗಳಲ್ಲಿ ಗೆಲುವು
29-2008ರ ಮೇ, 30 ರಂದು ಕರ್ನಾಟಕದ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
30-2008 ಮೇ, 30 ರಿಂದ 2011 ರ ಜುಲೈ 31 ರವರೆಗೂ 3 ವರ್ಷ 2 ತಿಂಗಳು ಸಿಎಂ ಆಗಿ ಆಳ್ವಿಕೆ
31-ಲೋಕಾಯುಕ್ತ ವರದಿಯ ಕಾರಣ 2011ರ ಜುಲೈ 31 ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ
32-ಸದಾನಂದಗೌಡರನ್ನು ಸಿಎಂ ಸ್ಥಾನಕ್ಕೆ ಸೂಚಿಸಿ ಆಯ್ಕೆ ಮಾಡಿಸಿದ ಬಿಎಸ್ವೈ
33-2012ರ ನವಂಬರ್ 30 ರಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
34-ಕರ್ನಾಟಕ ಜನತಾ ಪಕ್ಷ ಎಂಬ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಗೆ ಸಿದ್ದತೆ
35-2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು
36- ಕೆಜೆಪಿ ಪಕ್ಷದ ನಾಲ್ಕು ಮಂದಿ ವಿಧಾನಸಭೆಗೆ ಆಯ್ಕೆ
37-2013ರ ನವಂಬರ್ ನಲ್ಲಿ ಬೇಷರತ್ ಆಗಿ ಬಿಜೆಪಿಗೆ ಮರುಸೇರ್ಪಡೆ ಘೋಷಣೆ
38- 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆ
39-2016 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ವೈ ಮರು ನೇಮಕ
40- 2018ರ ಚುನಾವಣೆಗೆ ಬಿಎಸ್ವೈ ಬಿಜೆಪಿ ಸಿಎಂ ಅಭ್ಯರ್ಥಿ
41- 2018ರ ಚುನಾವಣೆಯಲ್ಲಿ ಬಿಜೆಪಿಗೆ 104 ಕ್ಷೇತ್ರಗಳಲ್ಲಿ
ಗೆಲುವು, ಬಹುಮತಕ್ಕೆ 9 ಸ್ಥಾನದ ಕೊರತೆ
42- ರಾಜ್ಯಪಾಲರ ಆಹ್ವಾನದ ಮೇರೆಗೆ ಸಿಎಂ ಆಗಿ ಬಿಎಸ್ವೈ ಪ್ರಮಾಣವಚನ ಸ್ವೀಕಾರ
43- ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದ ರಾಜ್ಯಪಾಲರು
44- ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಕೇವಲ 24 ಗಂಟೆ ಸಮಯ ನೀಡಿಕೆ
45- ಬಳಿಕ ಎರಡೂವರೆ ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಎಸ್ವೈ
46-ಬಳಿಕ 2019ರ ಜುಲೈ 26 ರಂದು ಮತ್ತೆ ಸಿಎಂ ಹುದ್ದೆಗೇರಿದ ಬಿಎಸ್ವೈ
47-ಕೊರೊನಾ ಕಾಲದಲ್ಲಿ ಸಿಎಂ ಆಗಿ ಆಳ್ವಿಕೆ, ಕೋವಿಡ್ ನಿರ್ವಹಣೆ
48- 75 ವರ್ಷ ದಾಟಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಎಸ್ವೈ
49- ಬಿಎಸ್ವೈ ಸೂಚಿಸಿದ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆಯ್ಕೆ
50-2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 17 ಸ್ಥಾನಗಳಲ್ಲಿ ಗೆಲುವಿನಲ್ಲಿ ಬಿಎಸ್ವೈ ಪಾತ್ರ