Headlines

ಐಷರಾಮಿ ವಾಹನದಲ್ಲಿ ದನ ಕಳ್ಳತನ: ಕಾರು ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು

ಐಷರಾಮಿ ವಾಹನದಲ್ಲಿ ದನ ಕಳ್ಳತನ: ವಾಹನ ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು

Ripponpet police have cracked a cattle theft case involving a luxury vehicle, arresting two accused within 15 days. The swift operation was led by PSI Raju Reddy. Read the full crime report on Postman News.

ರಿಪ್ಪನ್‌ಪೇಟೆ: ಯಾರಿಗೂ ಅನುಮಾನ ಬಾರದಂತೆ ಐಷರಾಮಿ ವಾಹನವನ್ನು ಬಳಸಿಕೊಂಡು ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ರಿಪ್ಪನ್‌ಪೇಟೆ ಪಿಎಸ್ ಐ ರಾಜುರೆಡ್ಡಿ ನೇತ್ರತ್ವದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಜುಲೈ ತಿಂಗಳ ಆರಂಭದಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೇವಲ 15 ದಿನಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

​ಘಟನೆಯ ಹಿನ್ನೆಲೆ :

​ಜುಲೈ 3, 2026 ರ ರಾತ್ರಿ ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗಿರಿಗೌಡ ಎಂಬುವವರ ಮನೆಯ ಸಮೀಪ ಈ ಘಟನೆ ಜರುಗಿತ್ತು. ಕತ್ತಲಲ್ಲಿ ಐಷರಾಮಿ ವಾಹನದಲ್ಲಿ ಬಂದ ದುಷ್ಕರ್ಮಿಗಳು, ದನಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಐಷರಾಮಿ ವಾಹನ ಬಳಸಿದ್ದರಿಂದ ಸ್ಥಳೀಯರಿಗೆ ತಕ್ಷಣಕ್ಕೆ ಯಾವುದೇ ಅನುಮಾನ ಬಂದಿರಲಿಲ್ಲ. ಈ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ದೇವರಾಜ್ ಕೆರೆಹಳ್ಳಿ ಅವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು.

​ಕ್ಷಿಪ್ರ ಕಾರ್ಯಾಚರಣೆ ಮತ್ತು ಬಂಧನ

​ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಅವರ ನೇರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿತ್ತು. ಪಿಎಸ್‌ಐ ರಾಜು ರೆಡ್ಡಿ ಅವರ ನೇತೃತ್ವದ ಈ ತಂಡವು ತನಿಖೆಯನ್ನು ಚುರುಕುಗೊಳಿಸಿ, ಕೃತ್ಯ ನಡೆದ ಕೇವಲ 15 ದಿನಗಳ ಅಂತರದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.

​ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಹಳೆಮಂಡ್ಲಿ ನಿವಾಸಿ ಅಮೀರ್ ಸುಹೇಲ್ (26 ವರ್ಷ) ಮತ್ತು ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳು ಬಳಸಿದ್ದ ಇನ್ನೀವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.

​ಈ ಯಶಸ್ವಿ ಕಾರ್ಯಾಚರಣೆಯಲ್ಲಿಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ ಎನ್.ಎಂ, ಅಶೋಕ್, ವಿಶ್ವನಾಥ್ , ಪರಮೇಶ್ವರಪ್ಪ , ಮತ್ತು ಅವಿನಾಶ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಆರೋಪಿಗಳು ಐಷರಾಮಿ ವಾಹನಗಳನ್ನು ಬಳಸಿಕೊಂಡು ಇನ್ನಿತರ ಕಡೆಗಳಲ್ಲೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪೊಲೀಸರ ಈ ತ್ವರಿತ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

About The Author