ಹೇಳಿದ ಜಾಗಕ್ಕೆ ಆಟೋ ತರಲಿಲ್ಲವೆಂದು ಬ್ಲೇಡ್ನಿಂದ ಹಲ್ಲೆ; ಮೂವರ ವಿರುದ್ಧ ಎಫ್ಐಆರ್
Three unidentified youths allegedly attacked an auto-rickshaw driver with a blade in Shivamogga after an argument over dropping them at a specific location. A case has been registered at Tunganagar Police Station.
ಶಿವಮೊಗ್ಗ, ಜೂನ್ 17: ಕೇಳಿದ ಸ್ಥಳದವರೆಗೆ ಆಟೋ ತರಲಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕನ ಮೇಲೆ ಮೂವರು ಯುವಕರು ಬ್ಲೇಡ್ನಿಂದ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರದ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ. ಗಾಯಗೊಂಡ ಆಟೋ ಚಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಎಫ್ಐಆರ್ ಪ್ರಕಾರ, ಜೂನ್ 15ರಂದು ಸಂಜೆ ಸುಮಾರು 7:50ರ ವೇಳೆಗೆ ಆಟೋ ಚಾಲಕ ಜೈಲ್ ಸರ್ಕಲ್ ಆಟೋ ಸ್ಟ್ಯಾಂಡ್ನಲ್ಲಿ ನಿಂತಿದ್ದಾಗ ಮೂವರು ಅಪರಿಚಿತ ಯುವಕರು ವಾಜಪೇಯಿ ಲೇಔಟ್ಗೆ ಬಾಡಿಗೆಗೆ ಬರಲು ಕೇಳಿದ್ದಾರೆ. ಚಾಲಕ 200 ರೂಪಾಯಿ ಬಾಡಿಗೆ ಆಗುತ್ತದೆ ಎಂದು ತಿಳಿಸಿದ್ದು, ಅದಕ್ಕೆ ಯುವಕರು ಒಪ್ಪಿಕೊಂಡು ಆಟೋ ಹತ್ತಿದ್ದಾರೆ.
ವಾಜಪೇಯಿ ಲೇಔಟ್ ತಲುಪಿದ ಬಳಿಕ ಒಳಭಾಗದಲ್ಲಿ ಕತ್ತಲೆ ಹೆಚ್ಚಾಗಿದ್ದ ಕಾರಣ, ತಾನು ಅಷ್ಟು ಒಳಗಡೆ ಬರುವುದಿಲ್ಲ ಎಂದು ಚಾಲಕ ಆರ್ಚ್ ಸಮೀಪವೇ ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಬಾಡಿಗೆ ನೀಡುವುದಿಲ್ಲ ಎಂದು ಜಗಳ ಆರಂಭಿಸಿದ್ದಾರೆ.
ಬಳಿಕ ಚಾಲಕ ಸುಮಾರು 100 ಮೀಟರ್ ಒಳಗೆ ಆಟೋ ಚಲಾಯಿಸಿದಾಗ, ಮೂವರು ಯುವಕರು ಕೆಳಗಿಳಿದು ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ತಮ್ಮ ಬಳಿ ಇದ್ದ ಬ್ಲೇಡ್ನಿಂದ ಚಾಲಕನ ಎಡಗೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ಗಾಯಗೊಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಆರೋಪಿಗಳು ಕೈಯಿಂದ ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಚಾಲಕ ಆರೋಪಿಸಿದ್ದಾರೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.




