Headlines

ಭೀಕರ ರಸ್ತೆ ಅಪಘಾತ , ಹೊತ್ತಿ ಉರಿದ ಬಸ್ : ಕಾರು–ಖಾಸಗಿ ಬಸ್ ಡಿಕ್ಕಿ, ಆರು ಮಂದಿ ಸಜೀವ ದಹನ

ಭೀಕರ ರಸ್ತೆ ಅಪಘಾತ , ಹೊತ್ತಿ ಉರಿದ ಬಸ್ : ಕಾರು–ಖಾಸಗಿ ಬಸ್ ಡಿಕ್ಕಿ, ಆರು ಮಂದಿ ಸಜೀವ ದಹನ

Six people were charred to death after a car collided head-on with a private bus near Devapura in Yadgiri district. Two children are critically injured, while bus passengers escaped safely.

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನಗೊಂಡ ದುರ್ಘಟನೆ ನಡೆದಿದೆ.

ಮೃತರನ್ನು ಕೃಷ್ಣ ನಾಯಕ್ (52), ಅನಂತಕಲಾ ನಾಯಕ್ (45), ಶರಣಪ್ಪ (36), ನಿಸರ್ಗ ಶರಣಪ್ಪ (30), ಅವರ ಪುತ್ರ ಸಿದ್ಧಾರ್ಥ (3) ಹಾಗೂ ಶಶಿಕಲಾ (30) ಎಂದು ಗುರುತಿಸಲಾಗಿದೆ.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶರಣಪ್ಪ ದಂಪತಿಯ ಪುತ್ರಿಯರಾದ ಅದ್ವಿಕಾ (5) ಮತ್ತು ಶ್ರೀನಿಧಿ (1.5) ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಪ್ರಾಥಮಿಕ ತನಿಖೆ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಾರಿನ ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿಗೆ ಬೆಂಕಿ ತಗುಲಿ, ಕ್ಷಣಾರ್ಧದಲ್ಲೇ ಅಗ್ನಿಗಾಹುತಿಯಾಗಿದೆ.

ಯಾದಗಿರಿಯಿಂದ ರಾಯಚೂರು ಕಡೆ ಸಾಗುತ್ತಿದ್ದ ಕಾರು ಮತ್ತು ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ 8 ಜನರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದು, ಮೃತರು ಮತ್ತು ಗಾಯಾಳುಗಳು ಪರಸ್ಪರ ಸಂಬಂಧಿಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

About The Author