ದಾದಿಯರ ಸೇವೆ ಚಂಡಿಕಾ ಹೋಮದ ಪುಣ್ಯಕ್ಕೆ ಸಮ: ವಿನಯ್ಗುರೂಜಿ
Spiritual leader Vinay GurujI praises nurses’ service as equal to a sacred Chandika Homa during NGO inauguration and free health camp in Ripponpete, highlighting rural healthcare awareness.
ರಿಪ್ಪನ್ಪೇಟೆ: ಆಸ್ಪತ್ರೆಗಳಲ್ಲಿ ರೋಗಿಗಳ ಶೂಶ್ರುಷೆ ಮಾಡುವ ದಾದಿಯರ ಸೇವೆ ಚಂಡಿಕಾ ಹೋಮ ಮಾಡಿದಷ್ಟು ಪುಣ್ಯಕರವಾಗಿದ್ದು, ಮಾನವೀಯತೆಯ ಅತ್ಯುನ್ನತ ರೂಪವೆಂದು ಗೌರಿಗದ್ದೆ ಅವದೂತ ಸದ್ಗುರು ವಿನಯ್ಗುರೂಜಿ ಹೇಳಿದರು.
ಪಟ್ಟಣದ ಗುಡ್ಶಪರ್ಡ್ ಶಾಲಾ ಆವರಣದಲ್ಲಿ ನಡೆದ ಓಂ ಶ್ರೀಮಾತೃಶ್ರೀ ಸೇವಾ ಸಮಿತಿ (ರಿ) ಎನ್ಜಿಒ ಉದ್ಘಾಟನಾ ಸಮಾರಂಭ ಹಾಗೂ ಉಡುಪಿ ಆದರ್ಶ ಆಸ್ಪತ್ರೆಯ ವತಿಯಿಂದ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ವೈದ್ಯ ನಾರಾಯಣೋ ಹರಿ” ಎಂಬ ನಾಣ್ಣುಡಿಯಂತೆ ವೈದ್ಯಕೀಯ ಸೇವೆ ಪವಿತ್ರವಾದುದು. ಆದರೆ ಗ್ರಾಮೀಣ ಪ್ರದೇಶದ ಜನರು ದಿನನಿತ್ಯದ ದುಡಿಮೆಯಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರ ತಂಡವನ್ನು ಗ್ರಾಮಗಳಿಗೆ ಕರೆಸಿ, ಜನರ ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆ ನಡೆಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮಿಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಗ್ರಾಮೀಣ ಭಾಗಗಳಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸುವುದರಿಂದ ಜನರಲ್ಲಿ ಉಂಟಾಗುವ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜನರು ದುಡಿಮೆಯಲ್ಲೇ ತೊಡಗಿಸಿಕೊಂಡು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಆರೋಗ್ಯವಂತರಾಗಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದ್ದರಿಂದ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸರ್ಕಾರವು ಆಯುಷ್ಮಾನ್ ಕಾರ್ಡ್, ಯಶಸ್ವಿನಿ ಕಾರ್ಡ್ ಸೇರಿದಂತೆ ಹಲವು ಯೋಜನೆಗಳ ಮೂಲಕ ದುಬಾರಿ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಆರಂಭಿಸಿದ್ದ ಶೂಶ್ರುಷ ಯೋಜನೆಯು ಗ್ರಾಮೀಣ ಜನತೆಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಸ್ಮರಿಸಿದರು. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರವು ವ್ಯಾಪಾರೀಕರಣದ ದಾರಿಗೆ ತಿರುಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ವೈದ್ಯಕೀಯ ಸೇವೆ ಮಾನವೀಯತೆಯೊಂದಿಗೆ ನಡೆದುಕೊಂಡಾಗ ಮಾತ್ರ ಅದರ ಪವಿತ್ರತೆ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಓಂ ಶ್ರೀಮಾತೃಶ್ರೀ ಸೇವಾ ಸಮಿತಿ ಅಧ್ಯಕ್ಷೆ ಲೇಖನ ಜಿ. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ 650ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.
ಜಿಲ್ಲಾ ಸಹಕಾರ ಬ್ಯಾಂಕ್ ಆಧ್ಯಕ್ಷ ಆರ್.ಎಂ.ಮಂಜುನಾಥಗೌಡರು,ಶಿಮುಲ್ ಅಧ್ಯಕ್ಷ ವಿದ್ಯಾದರ್, ಆದರ್ಶ ಅಸ್ಪತ್ರೆಯ ಮುಖ್ಯಸ್ಥ ಡಾ.ಜಿ.ಎಸ್.ಚಂದ್ರಶೇಖರ್, ಪತ್ರಕರ್ತ ರಫಿ ರಿಪ್ಪನ್ ಪೇಟೆ , ಮಂಜುನಾಥ ಭದ್ರಾವತಿ, ಉದ್ಯಮಿ ವಿನಾಯಕ, ಕಾರ್ಯದರ್ಶಿ ಹೇಮಾಂಬಿಕ,ಉಮಾ,ಸಂಗೀತಷಾಜಿ,ಸುಶೀಲ ಕೆ,ಅಜೇಶ್, ತ್ರಿವೇಣಿ,ಸಾಜಿದಾ,ಮೊಹಮ್ಮದ್ ಜಹೀರ್ ಇನ್ನಿತರರು ಪಾಲ್ಗೊಂಡಿದರು.
ಪಿಯೂಸ್ ರೋಡ್ರಿಗಸ್ ಪ್ರಾರ್ಥನೆ ಸಲ್ಲಿಸಿದರು. ಸಬಾಸ್ಟಿನ್ ಮ್ಯಾಥ್ಯೂಸ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.




