ಪಕ್ಷಾತೀತ ಹೋರಾಟಕ್ಕೆ ಜನ ಬೆಂಬಲ , ರಾಜಕೀಯ-ಧಾರ್ಮಿಕ ನಾಯಕರ ಒಕ್ಕೊರಲ ಕೂಗು: ಪಾದಯಾತ್ರೆಗೆ ಹರಿದು ಬಂದ ಜನಸಾಗರ

ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಗಟ್ಟಿಯಾದ ಧ್ವನಿ | ಪಕ್ಷಾತೀತ ಹೋರಾಟಕ್ಕೆ ಜನ ಬೆಂಬಲ , ರಾಜಕೀಯ-ಧಾರ್ಮಿಕ ನಾಯಕರ ಒಕ್ಕೊರಲ ಕೂಗು: ಪಾದಯಾತ್ರೆಗೆ ಹರಿದು ಬಂದ ಜನಸಾಗರ

Thousands join a massive padayatra in Hosanagar demanding restoration of the विधानसभा constituency, as political leaders, seers, and the public unite for administrative justice and regional development.

ಹೊಸನಗರ: ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಹೊಸನಗರ ಪ್ರದೇಶ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಅನಿವಾರ್ಯ ಎಂದು ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ವಿವಿಧ ಧರ್ಮಗುರುಗಳು ಒಮ್ಮತದ ಧ್ವನಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಕಷ್ಟ ಹರ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೊಸನಗರ ನಾಡು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕ್ಷೇತ್ರ ಮರುಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತನು-ಮನ-ಧನ ಸಮರ್ಪಿಸುವುದಾಗಿ ಭರವಸೆ ನೀಡಿದರು. ತಾಲೂಕು ಎರಡು ಕ್ಷೇತ್ರಗಳಿಗೆ ಹಂಚಿರುವುದು ಆಡಳಿತಾತ್ಮಕವಾಗಿ ಸಂಕಷ್ಟ ಉಂಟುಮಾಡುತ್ತಿದೆ ಎಂದು ಹೇಳಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 2008ರ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿಯೇ ಹೊಸನಗರ ಕ್ಷೇತ್ರ ರದ್ದುಗೊಳಿಸುವ ನಿರ್ಧಾರಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಿದರು. ಆದರೆ ಆ ಸಮಯದಲ್ಲಿ ಅವರ ಆಕ್ಷೇಪಣೆ ಪರಿಗಣಿಸಲ್ಪಡಲಿಲ್ಲ. ಇದೀಗ ಜನರೇ ಹೋರಾಟಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ಕ್ಷೇತ್ರ ಮರುಸ್ಥಾಪನೆ ಜನರ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾಗಿದೆ. ಅಭಿವೃದ್ಧಿ, ಆಡಳಿತ ಸುಗಮತೆ ಮತ್ತು ಜನಸೇವೆ ದೃಷ್ಟಿಯಿಂದ ಪ್ರತ್ಯೇಕ ಕ್ಷೇತ್ರ ಅವಶ್ಯಕವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರಕಲು ಈ ಹೋರಾಟ ನಿರಂತರವಾಗಿರಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್ ಸೇರಿದಂತೆ ಹಲವಾರು ಗಣ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮೂಲೆಗದ್ದೆ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪಾದಯಾತ್ರೆಗೆ ದೊರೆತ ಭಾರೀ ಸ್ಪಂದನೆ ಜನರ ನೋವು ಮತ್ತು ಸಮಸ್ಯೆಗಳ ತೀವ್ರತೆಯನ್ನು ತೋರಿಸುತ್ತದೆ ಎಂದರು. ಧರ್ಮಾತೀತ, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಜನ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಇಲ್ಲಿನ ಜನತೆಗೆ ಹಕ್ಕು ಇದೆ. ಮುಳುಗಡೆ ಸೇರಿದಂತೆ ಹಲವು ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಆಡಳಿತಾತ್ಮಕ ಸುವ್ಯವಸ್ಥೆ ಸಿಗಬೇಕಾದರೆ ಪ್ರತ್ಯೇಕ ಕ್ಷೇತ್ರವೇ ಪರಿಹಾರ ಎಂದು ಹೇಳಿದರು. ಕಳೆದ 25 ವರ್ಷಗಳಿಂದ ಎದುರಿಸುತ್ತಿರುವ ಅನ್ಯಾಯಕ್ಕೆ ತೆರೆ ಬೀಳಬೇಕಿದ್ದು, ಕ್ಷೇತ್ರ ಮರುಸ್ಥಾಪನೆಯವರೆಗೆ ಹೋರಾಟ ನಿರಂತರವಾಗಿರಬೇಕು ಎಂದು ಕರೆ ನೀಡಿದರು.

ಈ ಪಾದಯಾತ್ರೆಯಲ್ಲಿ 96 ವರ್ಷದ ಹಿರಿಯ ರಾಜಕಾರಣಿ ಮತ್ತು ಮಾಜಿ ಶಾಸಕ ಬಿ. ಸ್ವಾಮಿರಾವ್ ಮೊದಲ ದಿನವೇ 18 ಕಿಮೀ ನಡೆದು ವಿಶೇಷ ಗಮನ ಸೆಳೆದರು. ವಾಹನದಲ್ಲಿ ತೆರಳುವಂತೆ ಮನವಿ ಮಾಡಿದರೂ ನಿರಾಕರಿಸಿ ಪಾದಯಾತ್ರೆಯಲ್ಲೇ ಭಾಗವಹಿಸಿದರು.

ಇನ್ನೊಂದೆಡೆ, ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಲಿಗ್ಗೇರಿ ಗ್ರಾಮದಿಂದ ನೂರಾರು ಗ್ರಾಮಸ್ಥರು ಎತ್ತಿನಗಾಡಿಗಳ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪಾದಯಾತ್ರೆಯ ಮಾರ್ಗದಲ್ಲಿ ಭಾಗವಹಿಸಿದವರಿಗೆ ಬಾಳೆಹಣ್ಣು, ಶರಬತ್ತು, ಐಸ್‌ಕ್ರೀಂ ಸೇರಿದಂತೆ ತಿನಿಸುಗಳನ್ನು ವಿತರಿಸಲಾಯಿತು.ಈ ಹೋರಾಟಕ್ಕೆ ಹೊಸನಗರ ತಾಲೂಕ್ ನಿವೃತ್ತ ಸೈನಿಕರ ಸಂಘ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ನಿಟ್ಟೂರು ಗರ್ತಿಕೆರೆ ಶ್ರೀಗಳು, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಎನ್.ಆರ್. ದೇವಾನಂದ್, ಕೆ.ವಿ. ಕೃಷ್ಣಮೂರ್ತಿ,ರಮಾಕಾಂತ್,ಚಿದಂಬರ,ಮಹೇಶ್ ದೇವರಸಲಿಕೆ, ಆಲುವಳ್ಳಿ ವಿರೇಶ್,ಆರ್.ಎ.ಚಾಬುಸಾಬ್ , ರಮೇಶ್ ಹಲಸಿನಹಳ್ಳಿ, ಕರುಣಾಕರ ಶೆಟ್ಟಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹಣ್ಯ, ಸುಧೀಂದ್ರ ಪಂಡಿತ್, ನಾರಾಯಣ ಕಾಮತ್, ಎನ್ ವರ್ತೇಶ್,ನೇಮಿರಾಜ್, ಸೇರಿದಂತೆ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಗರ ಹೋಬಳಿಯ 9 ಗ್ರಾಪಂಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ರವಿ ಬಿದನೂರು ನಿರ್ವಹಿಸಿದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ…

2 hours ago

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ Ripponpete Kenchanala Sri Marikamba Devi…

2 hours ago

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ Shikaripura MLA B.Y. Vijayendra…

3 hours ago

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ Mysuru DRM Mudit Mittal inspected…

3 hours ago

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ ಇಲ್ಲಿದೆ.

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ…

6 hours ago

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ – ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!?? ಈ ಸುದ್ದಿ ನೋಡಿ

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ - ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!??…

8 hours ago