Headlines

ರಿಪ್ಪನ್‌ಪೇಟೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ – ಪಂಚಾಯಿತಿ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

Severe drinking water crisis in Ripponpete Gram Panchayat limits has triggered public anger as borewells have dried up and authorities failed to provide tanker water, leaving residents struggling for basic needs.

ರಿಪ್ಪನ್‌ಪೇಟೆ: ಕಳೆದ ಒಂದು ತಿಂಗಳಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಗವಟೂರು, ಬರುವೆ, ಕೆರೆಹಳ್ಳಿ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೆ ಒಂದೇ ಬೊಕ್ಕಸ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ದೂರದ ಪ್ರದೇಶಗಳಿಗೆ ಹೋಗಿ ನೀರು ಹೊತ್ತು ತರುವ ಅನಿವಾರ್ಯತೆ ಎದುರಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಬೋರ್‌ವೆಲ್‌ಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ಇದನ್ನೇ ನೆಪವಾಗಿ ಅಧಿಕಾರಿಗಳು ನೀರು ಪೂರೈಕೆ ಸಾಧ್ಯವಿಲ್ಲವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ತಿಂಗಳಿನಷ್ಟು ಕಾಲ ಸಮಸ್ಯೆ ಮುಂದುವರಿದರೂ ಪರ್ಯಾಯ ವ್ಯವಸ್ಥೆ ಮಾಡದ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪಂಚಾಯಿತಿ ವ್ಯಾಪ್ತಿಯ ಅರ್ಧಕ್ಕೂ ಹೆಚ್ಚು ಬೋರ್‌ವೆಲ್‌ಗಳು ನೀರಿಲ್ಲದೇ ಕೈಕೊಟ್ಟಿರುವ ವಿಚಾರವನ್ನು ಇತ್ತೀಚೆಗೆ ಕೆಡಿಪಿ ಸದಸ್ಯರೊಬ್ಬರು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬೇಳೂರು ಗೋಪಾಲಕೃಷ್ಣ ಹಾಗೂ ಆರಗ ಜ್ಞಾನೇಂದ್ರ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಂಡು ಜನರಿಗೆ ಸಮರ್ಪಕ ನೀರು ಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಆದರೂ ಸಭೆಯ ನಂತರವೂ ಸ್ಥಳೀಯ ಮಟ್ಟದಲ್ಲಿ ಯಾವುದೇ ಪರಿಣಾಮಕಾರಿ ಕ್ರಮಗಳು ಜಾರಿಯಾಗಿಲ್ಲ. ಹೊಸ ಬೋರ್‌ವೆಲ್ ಕೊರೆಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದರೂ, ಅದು ಕಾರ್ಯರೂಪಕ್ಕೆ ಬರದೆ ಜನರು ದಿನೇದಿನೇ ಸಂಕಷ್ಟ ಅನುಭವಿಸುವಂತಾಗಿದೆ. ಬೇಸಿಗೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಭೀತಿ ಎದುರಾಗಿದೆ.

ರಿಪ್ಪನ್ ಪೇಟೆ ಭಾಗದಲ್ಲಿ ನಡೆದ ಜೆಜೆಎಂ ಯೋಜನೆಗಳೆಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆಲಕಚ್ಚಿ ಹೋಗಿರುವುದು ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳ ನಡುವೆ ನಡೆದ ಝಣ ಝಣ ಕಾಂಚಾನದ ಸದ್ದು ನೆನಪಿಸುತ್ತದೆ.

ಇನ್ನೂ ಗಂಭೀರವಾದ ಆರೋಪವೆಂದರೆ, ಗ್ರಾಮದ ಹೊರಭಾಗದಲ್ಲಿ ಕೊಳವೆಬಾವಿ ಕೊರೆಸಿದರೆ ನೀರು ಸಿಗುವ ಸಾಧ್ಯತೆ ಇದ್ದರೂ, ಪಂಚಾಯಿತಿ ನೀರು ಇಲ್ಲದ ಪ್ರದೇಶಗಳಲ್ಲೇ ಪದೇಪದೆ ಬೋರ್‌ವೆಲ್ ಕೊರೆಸುತ್ತಿದ್ದು, ಇದರಿಂದ ಸರ್ಕಾರಿ ಹಣ ವ್ಯರ್ಥವಾಗುತ್ತಿದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯೋಜನೆಗಳ ಅವೈಜ್ಞಾನಿಕ ಅನುಷ್ಠಾನ ಹಾಗೂ ಸ್ಥಳೀಯ ವಾಸ್ತವ್ಯವನ್ನು ಅರಿಯದ ನಿರ್ಧಾರಗಳು ಈ ಸಂಕಷ್ಟಕ್ಕೆ ಕಾರಣವೆಂದು ಜನರು ಆರೋಪಿಸುತ್ತಿದ್ದಾರೆ.

“ಕುಡಿಯುವ ನೀರು ಮೂಲಭೂತ ಹಕ್ಕು. ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಗ್ರಾಮ ಪಂಚಾಯಿತಿ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದ್ದಾರೆ.

About The Author