ಹೆಚ್ಚಿನ ಬಡ್ಡಿ ವಸೂಲಿಗೆ ಇಳಿದರೆ ನಿರ್ದಾಕ್ಷಿಣ್ಯ ಕ್ರಮ – ಸಿಪಿಐ ಗುರಣ್ಣ ಹೆಬ್ಬಾಳ್
ರಿಪ್ಪನ್ಪೇಟೆ : ಖಾಸಗಿ ಅನಧಿಕೃತ ಹಣಕಾಸು ಲೇವಾದೇವಿದಾರರು ಮತ್ತು ಪಾನ್ ಬ್ರೋಕರ್ ಗಳು ಸಾಲ ನೀಡುವುದು ಮತ್ತು ಆಭರಣದ ಮೇಲೆ ಗಿರವಿ ಇಟ್ಟುಕೊಂಡು ಹಣ ನೀಡುವ ಮೂಲಕ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುವ ಬಗ್ಗೆ ಗ್ರಾಹಕರಿಂದ ದೂರು ಬಂದರೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಖಡಕ್ ವಾರ್ನಿಂಗ್ ನೀಡಿದರು.
ಪೊಲೀಸ್ ಇಲಾಖೆ ವತಿಯಿಂದ ಅಪರಾದ ತಡೆ ಅಭಿಯಾನದಡಿಯಲ್ಲಿ ದಿಢೀರ್ ಪಟ್ಟಣದ ಜ್ಯೂವೆಲರಿ ಅಂಗಡಿ, ಖಾಸಗಿ ಹಣಕಾಸು ಸಂಸ್ಥೆಯ ಪಿಗ್ಮಿ ಸಂಗ್ರಹಕಾರನ್ನು ಕರೆಯಿಸಿ ಸಭೆ ನಡೆಸಿ ಅನಧಿಕೃತವಾಗಿ ಹಣಕಾಸು ವ್ಯವಹಾರ ನಡೆಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಅಲ್ಲದೆ ಹೆಚ್ಚಿನ ಬಡ್ಡಿ ವಸೂಲಾತಿ ಮಾಡುವುದು ಸಹ ಕಾನೂನಿನಲ್ಲಿ ಅಪರಾಧವೇ ಆಗಿದೆ. ತಾವು ಕಾನೂನಿನ ಅರಿವಿಲ್ಲದೇ ಇಂತಹ ವ್ಯವಹಾರ ನಡೆಸುತ್ತಿರುವ ಬಗ್ಗೆ ಠಾಣೆಗೆ ಯಾರಾದರೂ ನೊಂದ ಗ್ರಾಹಕರು ದೂರು ನೀಡಿದರೆ ನಾವು ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿ, ಖಾಸಗಿ ಹಣಕಾಸು ವ್ಯವಹಾರ ನಡೆಸುವವರ ಮತ್ತು ಆಭರಣ ಅಂಗಡಿಯವರ ಸಭೆಯಲ್ಲಿ ಪೊಲೀಸ್ ಇಲಾಖೆಯ ಕೈಗೊಳ್ಳವ ಬಗ್ಗೆ ಕಾನೂನು ತಿಳುವಳಿಕೆಯನ್ನು ಸಮಗ್ರವಾಗಿ ವಿವರಿಸಿದರು.
ಠಾಣೆಯಲ್ಲಿ 5% ಬಡ್ಡಿ ನಿಗದಿ ಮಾಡಿ ಧಂಧೆಕೋರರ ಪರ ತೀರ್ಮಾನ ಮಾಡಿರುವ ಬಗ್ಗೆ ಕಪೋಕಲ್ಪಿತ ಆರೋಪಗಳು ಬಂದಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಈ ತರಹದ ಘಟನೆ ನಡೆದಿದ್ದರೆ ಈ ಬಗ್ಗೆ ಠಾಣೆಯಲ್ಲಿ ಮಾಹಿತಿ ಪಡೆದುಕೊಂಡು ವರದಿ ಮಾಡಬೇಕು ನಮ್ಮ ಠಾಣೆಯಲ್ಲಿ ಬಡ್ಡಿ ದಂಧೆಯಿಂದ ಭಾಧಿತರಾದ ವ್ಯಕ್ತಿಗಳು ನೇರವಾಗಿ ಬಂದು ದೂರು ಸಲ್ಲಿಸಿದ್ದಲ್ಲಿ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಿಪ್ಪನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಡ್ಡಿ ವ್ಯವಹಾರ ನಡೆಸುವ ಮತ್ತು ಆಭರಣ ಅಂಗಡಿಗಳಲ್ಲಿ ಬಂಗಾರ ಅಡಮಾನ ಸಾಲ ಪಡೆದು ಹೆಚ್ಚಿನ ಬಡ್ಡಿ ವಸೂಲಾತಿ ಮಾಡುತ್ತಿದ್ದಾರೆಂಬ ಬಗ್ಗೆ ಠಾಣೆಗೆ ಗ್ರಾಹಕರಿಂದ ದೂರುಗಳು ಬಂದಿಲ್ಲ. ಇನ್ನೂ ಮುಂದೆ ಯಾವುದೇ ಗ್ರಾಹಕರು ಅನಧಿಕೃತ ಖಾಸಗಿ ಹಣಕಾಸು ಸಂಸ್ಥೆಯವರು ಪಾನ್ ಬ್ರೋಕರ್ ಗಳು ಹೆಚ್ಚು ಬಡ್ಡಿ ವಸೂಲಾತಿ ಮಾಡುತ್ತಾರೆಂದು ದೂರು ನೀಡಿದರೆ ಹಿಂದೆ ಮುಂದೆ ನೋಡದೆ ಮೀಟರ್ ಬಡ್ಡಿಯಲ್ಲಿ ತೊಡಗುವ ಸಂಸ್ಥೆ ಮತ್ತು ಪಾನ್ಬ್ರೋಕರ್ಸ್ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಪ್ರವೀಣ್ ಎಸ್ ಪಿ ಮತ್ತು ಎಎಸ್ಐ ಮಂಜಪ್ಪ, ಹಾಲಪ್ಪ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.