ಪತ್ನಿಯನ್ನು ಮನೆಗೆ ಕಳಿಸಿಕೊಡಲು ಒಪ್ಪದ ಮಾವನ ಅಡಿಕೆ ತೋಟವನ್ನು ಧ್ವಂಸಗೊಳಿಸಿದ ಅಳಿಯ
ತನ್ನ ಪತ್ನಿಯನ್ನ ಮನೆಗೆ ವಾಪಸ್ ಕಳಿಸಿಲ್ಲ ಎಂಬ ಸಿಟ್ಟಿಗೆ ಮಾವ ಬೆಳಸಿದ್ದ ಅಡಿಕೆ ತೋಟದಲ್ಲಿ ಅಡಿಕೆ ಸಸಿಗಳನ್ನ ಅಳಿಯನೊಬ್ಬ ಕಡಿದು ಹಾಕಿದ ಘಟನೆ ಬಗ್ಗೆ ವರದಿಯಾಗಿದೆ.
ಹಾನಗಲ್ ತಾಲ್ಲೂಕಿನ ಬಸಾಪುರದಲ್ಲಿ ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದರ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳನ್ನ ಕೊಟ್ಟಿದ್ದರು. ವಿವಿಧ ವಿಚಾರಗಳಿಗೆ ಅಳಿಯನ ವಿರುದ್ಧ ಈ ಕುಟುಂಬ ಸಿಟ್ಟಾಗಿತ್ತು. ಅಲ್ಲದೆ ಮಗಳು ತವರು ಮನೆಗೆ ವಾಪಸ್ ಆಗಿದ್ದರು.
ಈ ವಿಷಯದಲ್ಲಿ ಅಳಿಯ ತನ್ನ ಪತ್ನಿಯನ್ನ ವಾಪಸ್ ಕುಳಹಿಸುವಂತೆ ಒತ್ತಾಯಿಸಿದ್ದ. ಆದರೆ ಮಾವ ಮದ್ಯವ್ಯಸನ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು. ಈ ನಡುವೆ ಸಿಟ್ಟಿಗೆದ್ದ ಅಳಿಯ ಇದೇ 23 ರ ರಾತ್ರಿ 106 ಅಡಿಕೆ ಸಸಿಗಳನ್ನ ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.
 
                         
                         
                         
                         
                         
                         
                         
                         
                         
                        