ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್ಪೇಟೆ : ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಅವರಲ್ಲಿ ಅಗಾಧವಾದ ಪ್ರತಿಭೆ ಚಾಣಾಕ್ಷತನ ಇರುತ್ತದೆ ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ, ಹೊರ ತಂದಾಗ ಮಾತ್ರ ಆ ಮಕ್ಕಳು ಮುಖ್ಯ ವಾಹಿನಿಗೆ ಬರುತ್ತಾರೆ ಇಂಥ ಕೆಲಸಗಳನ್ನು ಶಾಲಾ ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸಮೀಪದ ಚಿಕ್ಕ ಜೇನಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆಯ್ಕೆಯಾದ ಚಿಕ್ಕ ಜೇನಿ ಪ್ರೌಢಶಾಲಾ ವಿದ್ಯಾರ್ಥಿ ಕುಮಾರ್ ಅಭಿಷೇಕ್ ಗೆ ಸನ್ಮಾನ ಹಾಗೂ 2022- 23ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷ ಣಿಕ ಬದುಕನ್ನು ಆರೋಗ್ಯಕರವಾಗಿ ಸುಂದರಗೊಳಿಸಿಕೊಳ್ಳಬೇಕು. ಜೊತೆಗೆ ಇತರೆ ಹವ್ಯಾಸಕ್ಕೆ ಮಾರು ಹೋಗದೆ, ಶಿಕ್ಷ ಣ ಒಂದೇ ನಮ್ಮ ಬದುಕಿನ ಮಾರ್ಗ ಎಂದು ತಿಳಿದುಕೊಂಡು ನಡೆದಾಗ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಶಿಕ್ಷ ಕರ ಒಂದೊಂದು ಮಾತು ಬದುಕಿನ ಪಾಠ ಎಂದು ತಿಳಿದುಕೊಳ್ಳಬೇಕು ಎಂದರು.
ನಂತರ ಮಾತಾಡಿದ ಗ್ರಾ.ಪಂ. ಅಧ್ಯಕ್ಷ ಎನ್. ಪಿ ರಾಜು ಗ್ರಾಮೀಣ ಪ್ರದೇಶದ ಬಡ ಕುಟುಂಬದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವುದು ನಮ್ಮೂರಿಗೆ ಹೆಮ್ಮೆ ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಸೋಲಾರ್ ಹುಲ್ಲು ಕಟಾವ್ ಯಂತ್ರ ಕಂಡು ಹಿಡಿದು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ 9 ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಗೆ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ಕೆ ವಹಿಸಿದ್ದರು.
ಸಮಾರಂಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ, ವೆಂಕಟಾಚಲ, ಭದ್ರಪ್ಪ ಗೌಡ, ಬಿಇಓ ಕೃಷ್ಣಮೂರ್ತಿ, ಮುಖಂಡರಾದ ಬಿಜಿ ಚಂದ್ರಮೌಳಿ, ಮುಖ್ಯ ಶಿಕ್ಷಕ ಶಿವಾಜಿ , ಶಿಕ್ಷಕರಾದ ಎನ್ ಡಿ ಹೆಗಡೆ, ಶೇಖರಪ್ಪ ,ಅಣ್ಣಪ್ಪ ಶೆಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.