ರಿಪ್ಪನ್ಪೇಟೆ;-ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ನಲಿಕಲಿ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಕಲಿಕೆಯಲ್ಲಿ ಗುಣಾತ್ಮಕವಾಗಿ ಮಕ್ಕಳ ಬೆಳವಣಿಗೆಯನ್ನಾದರಿಸಿ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸುವ ಗುರುತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲ ಷರೀಫ್ ಹೇಳಿದರು.
ರಿಪ್ಪನ್ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಅಯೋಜಿಸಲಾದ ಶಿವಮೊಗ್ಗ ಜಿಲ್ಲೆಯ ಆಯ್ದ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಮತ್ತು ಶಿವಮೊಗ್ಗ ನಲಿಕಲಿ ಕ್ರಿಯಾಶೀಲ ತಾರೆಯರು ಸಹಕಾರ ಹಾಗೂ ಬೆಂಗಳೂರು ಮಾರುತಿ ಮೆಡಿಕಲ್ಸ್ ಮಾಲೀಕರಾದ ಮನೋಜ್ ಮೋಟೊ ರವರ ಸಹಕಾರದಿಂದ ಎರಡು ಲಕ್ಷ ರೂ ಮೌಲ್ಯದ ೧೦ ಸಹಸ್ರ ನೋಟ್ ಪುಸ್ತಕಗಳನ್ನು ಮೂರು ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಲಿಕಲಿ ತಾರೆಯ ಪೌಜಿಯಾ ಸರವತ್ ಮಾತನಾಡಿ ಮಾರುತಿ ಮೆಡಿಕಲ್ ಬೆಂಗಳೂರಿನ ಸಂಸ್ಥಾಪಕರಾದ ಮನೋಜ್ ಮೋಟೋ ಇವರು ಸಮಾಜ ಸೇವಕರು ಹಾಗೂ ಗೋ ರಕ್ಷಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಪ್ರತಿ ವರ್ಷ 8 ಲಕ್ಷ ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಾ ಬಂದಿರುತ್ತಾರೆ. ಇವರ ಉದ್ದೇಶ ದೇಶ, ದೇಶದ ಸಂಸ್ಕೃತಿ, ವಿದ್ಯಾರ್ಥಿಗಳು ಹೇಗಿರಬೇಕು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ತಮ್ಮ ನೋಟ್ ಪುಸ್ತಕದ ಮುಖಪುಟಗಳಲ್ಲಿ ಚಿತ್ರಿಸಿರುತ್ತಾರೆ ಇಂತಹವರು ನಮ್ಮ ಸಮಾಜಕ್ಕೆ ಆದರ್ಶರಾಗಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶ ಪರಮೇಶ್ವರಪ್ಪ ಮಾತನಾಡಿ ಮಕ್ಕಳಿಗೆ ಒದಗಿಸುವ ಸೌಲಭ್ಯಗಳ ಸದ್ಬಳಕೆಯೊಂದಿಗೆ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಜಿಲ್ಲಾ ಶಿಕ್ಷಣಾಧಿಕಾರಿ ಬಿಂಬಾ ಕೆ, ಡಯಟ್ನ ಹಿರಿಯ ಉಪನ್ಯಾಸಕರಾದ ಜಿ.ವಿ.ಹರಿಪ್ರಸಾದ್, ರೇಣುಕಾ,ವಿನೋದಕುಮಾರಿ,ಪಿಡಿಓ ರವಿಕುಮಾರ್,ಮಂಜುನಾಥ್ ಮಾದಾಪುರ ನಲಿಕಲಿ ಕ್ರಿಯಾಶೀಲತಾರೆಯರು ಸಂಸ್ಥೆಯ ಗೌರವಾಧ್ಯಕ್ಷೆ ವೈ.ಎನ್.ಲಲಿತಾ,ಭಾಗೀರಥಿ, ಮುಖಂಡರಾದ ಬಂಡಿ ರಾಮಚಂದ್ರ,ವಾಸಪ್ಪಗೌಡ, ನಾಗರಾಜ,ಪುಟ್ಟಮ್ಮ,ಶಿವಪ್ಪ,ಜಗದೀಶ್, ಇನ್ನಿತರ ಹಲವರು ಪಾಲ್ಗೊಂಡಿದ್ದರು.