ಶ್ರೀಕ್ಷೇತ್ರ ಹೊಂಬುಜದಲ್ಲಿ ಮೌನ ಪ್ರತಿಭಟನೆ
ಹೊಂಬುಜ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿನ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹಾರಾಜರು ತೀವ್ರ ಹಿಂಸಾತ್ಮಕ ರೀತಿಯಲ್ಲಿ ಕೊಲೆ ಮಾಡಿರುವುದು ಖಂಡಿಸಿ ಹೊಂಬುಜದಲ್ಲಿ ಮೌನ ಪ್ರತಿಭಟನೆಯನ್ನು ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜು. 12ರಂದು ನಡೆಸಲಾಯಿತು.
ಶ್ರೀಕ್ಷೇತ್ರದಿಂದ ನಾಡಕಛೇರಿಯವರೆಗೆ ಮೌನ ಪ್ರತಿಭಟನೆ ಮಾಡಲಾಯಿತು.
ಶ್ರೀಗಳವರು ಉಪತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ನಮ್ಮ ದೇಶ ಅನಾದಿ ಕಾಲದಿಂದಲೂ ಋಷಿ ಮುನಿಗಳ ಆಶೀರ್ವಾದದಿಂದ ನಾಗರೀಕ ಸಮಾಜ ಸಮೃದ್ಧಿಯಾಗಿ ಸಂಸ್ಕಾರವAತವಾಗಿ ಬೆಳೆದಿರುವುದು ನಾವು ಇತಿಹಾಸದ ಪುಟಗಳಲ್ಲಿ ನೋಡುತ್ತೇವೆ. ಇಂತಹ ಇತಿಹಾಸ ಪ್ರಸಿದ್ಧ, ಸಂಸ್ಕಾರವಂತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೆಲಸ ಕಾರ್ಯಗಳು ನಡೆಯುತ್ತಿರುವುದು ದುಃಖಕರ ಸಂಗತಿ.
ಯಾವುದೇ ಒಂದು ಧರ್ಮದ ಅನುಯಾಯಿಗಳಿರಬಹುದು ಅನ್ಯತಾವಾಗಿ ಯಾರಿಗೂ ಹಿಂಸೆ ಮಾಡಬಾರದು ಎನ್ನುವುದು ನಮ್ಮ ಭಾರತದ ಧರ್ಮದ ತಿರುಳಾಗಿದೆ. ಸಾಮಾನ್ಯ ಜನರಲ್ಲಿ ಈ ರೀತಿಯ ಕೊಲೆಯಾಗುತ್ತಿರುವ ಘಟನೆಯನ್ನು ನಾವು ನೋಡುತ್ತಿದ್ದೆವು. ಆದರೆ ಕೆಲವು ವರ್ಷಗಳಲ್ಲಿ ಸಾಧು ಸಂತರಿಗೆ ಹಲ್ಲೇ ಮಾಡುತ್ತಿರುವುದು ಇಡಿ ನಮ್ಮ ದೇಶಕ್ಕೆ ತಲೆತಗ್ಗಿಸುವ ವಿಚಾರ.
ಇತ್ತೀಚಿನ ನಾಲ್ಕೈದು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಹೀರೇಕೋಡಿ ಗ್ರಾಮದಲ್ಲಿ ದಿಗಂಬರ ಆಚಾರ್ಯ ಮುನಿಶ್ರೀಗಳವರನ್ನು ಅಮಾನುಷವಾಗಿ ಕೊಲೆಮಾಡಿದ ಘಟನೆ ನಮ್ಮ ಸಮಾಜಕ್ಕೆ ತಲೆತಗ್ಗಿಸುವ ವಿಷಯವಾಗಿದೆ.
ಈ ದೇಶದಲ್ಲಿ ಕಾನೂನಿಗೆ ಭಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾವು ಇಂದು ಭಾರತ ಸರ್ಕಾರ ಕರ್ನಾಟರ ರಾಜ್ಯ ಸರ್ಕಾರ ಎಲ್ಲ ಕಾನೂನಿಗೆ ಸಂಬಂಧಪಟ್ಟವರಿಗೆ ನಿವೇದಿಸಿಕೊಳ್ಳುವುದೇನೆಂದರೆ ಎಲ್ಲಾ ಸಮಾಜದವರಿಗೆ ಭಯದ ವಾತಾವರಣ ಇದೆ. ಒಬ್ಬ ಸಾಧು ಸಂತರನ್ನೇ ಈ ರೀತಿಯಾಗಿ ಮಾಡಿದ್ದಾರೆಂದರೆ ಸಾಮಾನ್ಯ ಜನರ ಯಾವ ರೀತಿ ನಾಳೆ ತೊಂದರೆಯಾಗಬಹುದು ಈ ಘಟನೆಯಿಂದ ನಮಗೆಲ್ಲ ತಿಳಿದಿದೆ.
ಈ ನಿಟ್ಟಿನಲ್ಲಿ ನಮ್ಮ ಸರ್ಕಾರದವರು ಈಗಾಗಲೇ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದು ಒಳ್ಳೆಯ ರೀತಿಯ ಕಾನೂನು ಜಾರಿಗೆ ಬರಬೇಕು. ಇಂತಹ ಕೃತ್ಯಗಳು ಇನ್ನು ಮುಂದೆ ನಡೆಯಬಾರದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಹೊಂಬುಜದ ದಿಗಂಬರ ಜೈನ ಸಮಾಜದವರು, ಸಾರ್ವಜನಿಕರು ಹಾಗೂ ಜಯಕರ್ನಾಟಕ ವೇದಿಕೆಯ ಕಾರ್ಯಕರ್ತರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

