ಅದ್ದೂರಿಯಾಗಿ ಜರುಗಿದ ಶರಾವತಿ ಹಿನ್ನೀರ ಮೇಳ – ಶರಾವತಿ ಆರತಿ
ಶರಾವತಿ ಸಂತ್ರಸ್ತರು ಒಂದು ಇಂಚು ಜಾಗವೂ ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಶಪಥ ಮಾಡಿ ಹೇಳುತ್ತೇನೆ ಸರ್ಕಾರ ರೈತರ ಪರವಾಗಿದೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.
ಹೊಸನಗರ ತಾಲ್ಲೂಕಿನ ಪಟಗುಪ್ಪ ಸೇತುವೆ ಬಳಿ ನಡೆದ ಶರಾವತಿ ಹಿನ್ನೀರ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ರೈತರು ಸರ್ಕಾರದ ಮೇಲೆ ನಂಬಿಕೆ ಇಡಬೇಕು. ಯಾವುದೇ ಕಾರಣಕ್ಕೂ ರೈತರಲ್ಲಿ ಆತಂಕ ಬೇಡ. ರೈತರನ್ನು ಒಕ್ಕಲೇಬ್ಬಿಸಲು ಬಿಡಲ್ಲ. ಸದ್ಯದಲ್ಲೆ ಶುಭಸುದ್ದಿ ನೀಡಲಿದ್ದೇವೆ. ರೈತರ ಸಮಸ್ಯೆ ಉಲ್ಬಣವಾಗಲು ಕಾಂಗ್ರೆಸ್ ನೇರ ಕಾರಣ. ಅಧಿಕಾರ ಇದ್ದಾಗ ಸಮಸ್ಯೆ ಬಗೆಹರಿಸದೇ ಈಗ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದರು.
ಶರಾವತಿ ನದಿಗೆ ಸೇತುವೆ ಕಟ್ಟುವಲ್ಲಿ ವಿಶೇಷ ಆಸಕ್ತಿ ತೋರಿದ್ದೇನೆ. ಇದೀಗ ಮೂರು ಸೇತುವೆ ಆಗುತ್ತಿದೆ. ಇದು ನಮ್ಮ ಸರ್ಕಾರದ ಹೆಮ್ಮೆ ಆಗಿದೆ ಎಂದರು.
ಹಿನ್ನೀರ ಹಬ್ಬದ ವಿಚಾರದಲ್ಲಿ ವಿರೋಧಿಗಳು ತಮ್ಮ ಮಾತಿನ ಚಪಲತೆ ತೋರಿದ್ದಾರೆ. ನಾಡಿಗೆ ಬೆಳಕು ನೀಡಿದ ಖ್ಯಾತಿ ಶರಾವತಿಗೆ ಇದೆ. ಶರಾವತಿ ನದಿ ದಡದಲ್ಲಿ ಇದ್ದ ನಮಗೆ ಹಬ್ಬ ಆಚರಿಸುವ ಸಂಭ್ರಮ ಇಲ್ಲವೆ ? ನಮ್ಮ ಮಕ್ಕಳು ಏನು ಮಾಡಿದ್ದಾರೆ ? ಇಲ್ಲಿ ಸೇರಿದ ಜನರು ಸಂಭ್ರಮ ಪಡುತ್ತಿದ್ದಾರೆ. ಇಷ್ಟು ಜನ ಕಲೆತು ಸಂಭ್ರಮ ಪಡುವ ಹಬ್ಬದ ಆಚರಣೆ ಕಣ್ಣೀರು ಹೇಗೆ ಆಗುತ್ತದೆ ? ಎಂದು ಪ್ರಶ್ನಿಸಿ ‘ಹಿನ್ನೀರನ್ನು ಪನ್ನೀರು ಮಾಡಿ ತೋರಿಸುತ್ತೇವೆ’ ಎಂದರು.
ಅಂದು ಶರಾವತಿಗೆ ಮೊದಲ ಸೇತುವೆಯಾಗಿ ಸಿಗಂದೂರು ಬಳಿಯ ಮಡೆನೂರು ಹಳ್ಳಿಯಲ್ಲಿ ಸೇತುವೆ ಕಟ್ಟಿದ್ದರು. ಲಿಂಗನಮಕ್ಕಿ – ಮಡೆನೂರು ಸೇತುವೆ ಸೇರಿ ಈ ನದಿಗೆ ಸೇತುವೆ ಮೇಲೊಂದು ಸೇತುವೆಗಳಾಗಿ ಈ ಹಾದಿಗಳೆಲ್ಲಾ ಮುಳುಗಿ ಹೋದವು. ನಂತರ ಈ ಸಂಪರ್ಕವೇ ಕಡಿದು ಹೋಯ್ತು. ನಂತರ ಹೊಸ ಹೆದ್ದಾರಿಯನ್ನ ಬಟ್ಟೆಮಲ್ಲಪ್ಪ ಎಂಬ ಊರಿನ ಮೂಲಕ ಸಾಗರಕ್ಕೆ ಸಂಪರ್ಕ ಸಾಧಿಸುವಂತೆ ಮಾಡಿದರು. ಈ ಹೆದ್ದಾರಿ ಸುತ್ತು ಹಾಕಿ ಹೋದರೆ 42 ಕಿಲೋಮೀಟರ್ ಹೆಚ್ಚುವರಿ ಕ್ರಮಿಸಬೇಕಿತ್ತು. ನಾನು ಮೊದಲ ಸಲ ಹೊಸನಗರ ಶಾಸಕನಾದಗ ಜನ ಪಟಗುಪ್ಪ ಸೇತುವೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಭಾಗದಲ್ಲಿ ಜನ ಸೇತುವೆ ನಿರೀಕ್ಷೆ ಮರೆತ್ತಿದ್ದರು. ‘ಈ ಸೇತುವೆ ಆಗೋದೂ ಒಂದೇ ನಮ್ಮ ಮನೆ ಹುಡುಗನಿಗೆ ಬುದ್ಧಿ ಬರೋದೂ ಒಂದೇ’ ಎಂದು ಆಡಿಕೊಳ್ಳುತ್ತಿದ್ದರು. ನಾನು ಸವಾಲಾಗಿ ಸ್ವೀಕರಿಸಿ ನಿರ್ವಹಿಸಿದೆ. ಅಂದು ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಒತ್ತಾಸೆಯಾಗಿ ನಿಂತರು ಎಂದು ಹಾಲಪ್ಪ ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಪಟಗುಪ್ಪ ಸೇತುವೆ ದಡದಲ್ಲಿ ಶರಾವತಿ ಆರತಿ ಕಾರ್ಯಕ್ರಮ ನಡೆಯಿತು.
ಶರಾವತಿ ಹಿನ್ನೀರ ಹಬ್ಬದ ಅಂಗವಾಗಿ ಬಳೆ ಕೋಲಾಟ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಲೆನಾಡಿನ ವಿಶಿಷ್ಟ ಖಾದ್ಯಗಳ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಗಣಪತಿ ಬೆಳಗೋಡು, ಸುರೇಶ್ ಸ್ವಾಮಿರಾವ್,ವೀರೇಶ್ ಆಲುವಳ್ಳಿ, ಲೋಕನಾಥ್, ಗಣೇಶ್ ಪ್ರಸಾದ್ ಇದ್ದರು.