ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯ ಶವವನ್ನು ಕೂರಿಸಿಕೊಂಡು ಬಂದು ಊರಿನ ಸರ್ಕಲ್ ನಲ್ಲಿ ಮಲಗಿಸಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಮುತ್ತಳ್ಳಿ ಗ್ರಾಮದಲ್ಲಿ ನಡೆದಿದೆ.ಇದು ಕೊಲೆ ಎಂದು ಕುಟುಂಬ ಆರೋಪಿಸಿದೆ.
ಘಟನೆಯ ಹಿನ್ನಲೆ :
ಶಿರಾಳಕೊಪ್ಪ ಪೊಲೀಸ್ ಠಾಣೆಯ ಮುತ್ತಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ(30) ಈತನಿಗೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿ ಕಳುಹಿಸಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ.
ಸೋಮಪ್ಪ ಈ ಹಿಂದೆ ಕೆಲಸದ ಮೇಲೆ ಹಿರೇಕೆರೂರಿಗೆ ಹೋದಾಗ ಗಂಗಮ್ಮ ಪರಿಚಯವಾಗಿದ್ದಳು. ಈ ಪರಿಚಯ ದೈಹಿಕ ಸಂಬಂಧ ಬೆಳೆಯಲು ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಹಾಗಂತ ಸೋಮಪ್ಪನಿಗೆ ಮದುವೆಯಾಗಿ ಮಗಳಿದ್ದಾಳೆ. ಆದರೆ ಪತ್ನಿಯಿಂದ ದೂರವಾಗಿ ಬದುಕಲು ಆರಂಭಿಸಿ ಬಹಳ ದಿನಗಳೇ ಕಳೆದಿವೆ.
ನಿನ್ನೆ ಹಿರೇಕೆರೂರಿಗೆ ಕರೆಯಿಸಿ ಥಳಿಸಲಾಗಿದೆ. ಥಳಿತಕ್ಕೆ ಸೋಮಪ್ಪ ಜೀವ ಬಿಟ್ಟಿದ್ದಾನೆ. ಆತನನ್ನ ಬೈಕ್ ಮೇಲೆ ಕೂರಿಸಿಕೊಂಡು ಬಂದು ಇಂದು ಬೆಳಿಗ್ಗೆ ಮುತ್ತಳ್ಳಿ ಗ್ರಾಮದ ವೃತ್ತದ ಬಳಿ ಮಲಗಿಸಿ ಹೋಗಿದ್ದಾರೆ. ಸೋಮಪ್ಪನ ಮೇಲೆ ಸಾಕಷ್ಟು ಗಾಯಗಳಾಗಿವೆ. ಆತನ ಮೇಲೆ ತುಂಡು ಬಟ್ಟೆ ಬಿಟ್ಟರೆ ಬೇರೆ ಏನು ಇರಲಿಲ್ಲವೆಂದು ಕುಟುಂಬ ಆರೋಪಿಸಿದೆ.
ಬೈಕ್ ಮೇಲೆಕೂರಿಸಿಕೊಂಡು ಬಂದವರನ್ನ ಚಾಟಿಕೊಪ್ಪದ ರಮೇಶ್, ಸುದೀಪ್ ಮತ್ತು ಗಂಗಮ್ಮನ ಮಗ ನಾಗರಾಜ್ ಎಂದು ಗುರುತಿಸಲಾಗಿದೆ. ಇವರೇ ಸೇರಿಕೊಂಡು ಕೊಲೆ ಮಾಡಿರುವುದಾಗಿ ಮೃತನ ತಂದೆ ಚಂದ್ರಪ್ಪ, ತಾಯಿ ಶಿವನಾಗಮ್ಮ ಮತ್ತು ಜೀವಪ್ಪ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಈ ಪ್ರಕರಣ ಹಿರೇಕೆರೂರುನಲ್ಲಿ ನಡೆದಿದ್ದು ಶಿರಾಳಕೊಪ್ಪ ಠಾಣಾ ವ್ಯಾಪ್ತಿಯ ಮುತ್ತಳ್ಳಿಯಲ್ಲಿ ಸೋಮಪ್ಪನ ಮೃತದೇಹವನ್ನ ಬಿಟ್ಟುಹೋಗಿರುವುದರಿಂದ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ.
ಆರೋಪಿಗಳ ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ. ಇವರ ಪತ್ತೆಗಾಗಿ ಖಾಕಿಪಡೆ ಭರ್ಜರಿ ಬಲೆ ಬೀಸಿದೆ. ಪೊಲೀಸ್ ತನಿಖೆಯಿಂದ ಕೊಲೆಗೆ ಕಾರಣವೇನು ಎಂಬುದು ತಿಳಿದು ಬರಲಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್