ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ
Former Education Minister Kimmane Ratnakar says internal divisions within Congress helped the BJP, while challenging MLA Araga Jnanendra for an open comparison of development works in Tirthahalli.
ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಒಡಕು ಬಿಜೆಪಿಗೆ ಅನುಕೂಲವಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬಿಂತ್ಲಾ ಗ್ರಾಮದಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆ ಹಾಗೂ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಬಿಜೆಪಿ ಪಕ್ಷಕ್ಕೆ ಬೇರೆ ಯಾರಿಂದಲೂ ಸಹಾಯವಾಗಿಲ್ಲ. ಆದರೆ ನಮ್ಮಲ್ಲಿರುವ ಒಡಕು ಬಿಜೆಪಿಗೆ ಸಹಾಯ ಮಾಡಿದೆ. ನಾನು ಕ್ಷೇತ್ರದಲ್ಲಿ ಹಾಗೂ ಕ್ಷೇತ್ರದ ಹೊರಗೆ ಸುಮಾರು 2,000 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇನೆ. ಸಾಕಷ್ಟು ಹೋರಾಟಗಳನ್ನು ನಡೆಸಿದ್ದೇನೆ. ಆದರೆ ನಮ್ಮ ಸೋಲಿಗೆ ನಮ್ಮವರೇ ಕಾರಣವಾಗಿದ್ದರೆ ಬೇರೆ ಏನು ಹೇಳುವುದು?” ಎಂದು ಕಿಮ್ಮನೆ ರತ್ನಾಕರ್ ಬೇಸರ ವ್ಯಕ್ತಪಡಿಸಿದರು.
ಧಾರ್ಮಿಕ ಕಾರ್ಯಕ್ರಮಗಳು, ಗಣೇಶೋತ್ಸವ, ರಥೋತ್ಸವ ಹಾಗೂ ಕ್ರೀಡಾಕೂಟಗಳಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಬಹುದು. ಆದರೆ ರಾಜಕೀಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.
“ವೈಯಕ್ತಿಕವಾಗಿ ಯಾರೊಂದಿಗೂ ದ್ವೇಷ ಮಾಡಬಾರದು. ಆದರೆ ರಾಜಕೀಯ ವಿಚಾರದಲ್ಲಿ ಪಕ್ಷದ ವಿರುದ್ಧ ಹೊಂದಾಣಿಕೆ ಮಾಡಿಕೊಳ್ಳಬಾರದು. ಯಾರಿಗಾದರೂ ಬಿಜೆಪಿ ಮೇಲೆ ಪ್ರೀತಿ ಇದ್ದರೆ ಅವರು ಅಲ್ಲಿಗೇ ಹೋಗಬಹುದು. ನಾವು ಬ್ಯಾಂಡ್ ಸೆಟ್ ಸಮೇತ ಅವರನ್ನು ಕಳುಹಿಸಿಕೊಡುತ್ತೇವೆ,” ಎಂದು ಅವರು ತೀಕ್ಷ್ಣವಾಗಿ ಹೇಳಿದರು.
ಕೆಲವರು ಬಿಜೆಪಿ ನಾಯಕರು ಜ್ಞಾನೇಂದ್ರ, ಹಾಲಪ್ಪ ಹಾಗೂ ರಾಘವೇಂದ್ರ ಅವರೊಂದಿಗೆ ಪಾದಯಾತ್ರೆ ಮಾಡುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಮಧು ಬಂಗಾರಪ್ಪ, ಪ್ರಸನ್ನ ಕುಮಾರ್ ಸೇರಿದಂತೆ ಪಕ್ಷದ ನಾಯಕರೊಂದಿಗೆ ಯಾಕೆ ಹೆಜ್ಜೆ ಹಾಕುವುದಿಲ್ಲ ಎಂದು ಆರ್.ಎಂ. ಮಂಜುನಾಥಗೌಡರ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.
ಮುಂದಿನ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಯಾರ ಪರವಾಗಿ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಕರ್ತರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
“ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಬಲವರ್ಧನೆಗೆ ತೊಂದರೆಯಾಗಬಾರದು. ಬಿಜೆಪಿಯವರು ಅಧಿಕಾರದಲ್ಲಿ ಭದ್ರವಾಗಲು ನಮ್ಮೊಳಗಿನ ಭಿನ್ನಾಭಿಪ್ರಾಯ ಕಾರಣವಾಗಬಾರದು. ಪಕ್ಷದ ಬಲವರ್ಧನೆಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪಕ್ಷದ ಘನತೆ ಮತ್ತು ಗೌರವ ಉಳಿಯಬೇಕು,” ಎಂದರು.
ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ ಕಿಮ್ಮನೆ ರತ್ನಾಕರ್, ಕಳೆದ ಹತ್ತು ವರ್ಷಗಳಲ್ಲಿ ಇಬ್ಬರೂ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸೋಣ , “ನೀವು ಮಾಡಿರುವ ಕಾಮಗಾರಿಗಳಿಗಿಂತ ನಾನು ಮಾಡಿದ ಕಾಮಗಾರಿಗಳು ಕಡಿಮೆಯಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ,” ಎಂದು ಅವರು ಸವಾಲು ಹಾಕಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ಪಾದಯಾತ್ರೆ ನಡೆಸುತ್ತಾ ಟೀಕೆ ಮತ್ತು ಆರೋಪಗಳಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತು ಮಾತನಾಡಿದ ಅವರು, ತೀರ್ಥಹಳ್ಳಿ ಭಾಗದಲ್ಲಿ ಹಿಂದೆ 139 ಗ್ರಾಮಗಳಿದ್ದರೆ, ಈಗಿನ ವರದಿಯಲ್ಲಿ 154 ಗ್ರಾಮಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು. ಈ ವಿಚಾರದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಮತ್ತು ಸಂಸದರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
2016ರಲ್ಲಿ ಕಸ್ತೂರಿರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ಸಭೆ ಕರೆದಿದ್ದ ಸಂದರ್ಭವನ್ನು ಪ್ರಸ್ತಾಪಿಸಿದ ಮಧು ಬಂಗಾರಪ್ಪ, ಶಿವಮೊಗ್ಗದಿಂದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರು ಈ ವಿಚಾರದಲ್ಲಿ ಯಾವ ರೀತಿಯ ಪಾತ್ರ ವಹಿಸಿದ್ದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂಬ ಆರೋಪವನ್ನೂ ಅವರು ಮಾಡಿದರು.
ಪಟಗುಪ್ಪ ಸೇತುವೆ ಬಳಿಯ ಹಿನ್ನೀರಿನಲ್ಲಿ ಅನಾಮಧೇಯ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ An unidentified man’s partially decomposed…
ಬಸ್-ಬೈಕ್ ಭೀಕರ ಅಪಘಾತ; 27 ವರ್ಷದ ಮೆಕ್ಯಾನಿಕ್ ಸ್ಥಳದಲ್ಲೇ ಸಾವು A 27-year-old mechanic was killed in a…
ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಮೂರು ವರ್ಷದ ಕರಡಿ ಸಾವು - ತೋಟದ ಮಾಲೀಕನ ಬಂಧನ A three-year-old male…
ಶಿವಮೊಗ್ಗದಲ್ಲಿ ರೌಡಿಶೀಟರ್ ‘ಕುಳ್ಳಿ ಕಿರಣ್’ ಬರ್ಬರ ಹತ್ಯೆ; ಪ್ರಮುಖ ಆರೋಪಿ ಉಮೇಶ್ ಮೇಲೆ ಪೊಲೀಸ್ ಫೈರಿಂಗ್ Shivamogga rowdy sheeter…
ಜಂಬಳ್ಳಿ ಅರಣ್ಯದಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸೊಸೈಟಿ ಸಿಇಒ ಮದನ್ ಸುರಕ್ಷಿತ ಪತ್ತೆ Kudumallige Society CEO Madan,…
ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು ರಿಪ್ಪನ್ ಪೇಟೆ : ಬಾಳಿನ…