ತೀರ್ಥಹಳ್ಳಿ : ಗುರುವಾರ ಕೋಣಂದೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿಗ ಸದಸ್ಯ ರವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಬಿಜೆಪಿ ಬೆಂಬಲಿತ ಸದಸ್ಯ ಪೂರ್ಣೇಶ್ ಗ್ರಾಮ ಪಂಚಾಯತ್ ಸದಸ್ಯತ್ವವನ್ನು ರದ್ದುಗೊಳಿಸ ಬೇಕೆಂದು ಆಗ್ರಹಿಸಿ ಸೋಮವಾರ ದಿನಾಂಕ 17/01/2022 ರಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ರವರ ನೇತೃತ್ವದಲ್ಲಿ ತಾಲ್ಲೂಕು ತಹಶಿಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ತಿಳಿಸಿದ್ದಾರೆ.
ಗೃಹ ಮಂತ್ರಿಗಳ ಬೆಂಬಲಿಗ ಮತ್ತು ಕೋಣಂದೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಎ ಸಿ ಪೂರ್ಣೇಶ್ ರವರು ಗ್ರಾಮ ಪಂಚಾಯತ್ ಕಛೇರಿಯಲ್ಲೇ ಅಧಿಕೃತ ಗ್ರಾಮ ಪಂಚಾಯತ್ ಸದಸ್ಯರ ಸಭೆಯಲ್ಲಿ ಕೋಣಂದೂರಿಗೆ ವರ್ಷಪೂರ್ತಿ ಕುಡಿಯುವ ನೀರು ಒದಗಿಸುವ ಮತ್ತು ಸುತ್ತಲಿನ ಹತ್ತು ಗ್ರಾಮಗಳಿಗೆ ಕೃಷಿಗೆ ಆಧಾರವಾಗಿರುವ ದೊಡ್ಡ ಕೆರೆಯ ಏರಿಯನ್ನು ಯಾರ ಅನುಮತಿಯು ಪಡೆಯದೆ ಒಡೆದು ನೀರನ್ನು ಹೊರಬಿಡುತ್ತಿರುವ ಬಗ್ಗೆ ಚರ್ಚೆ ಮಾಡುವಾಗ ಏಕಾಏಕಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಕೆ ಎನ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇತರೆ ಸದಸ್ಯರಿಗೆ ಹಲ್ಲೆ ನಡೆಸುವ ಧಮಕಿ ಹಾಕಿ ಗೃಹಮಂತ್ರಿಗಳು ನನ್ನ ಬೆಂಬಲಕ್ಕಿದ್ದು, ನಿಮ್ಮ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿಸುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪೂರ್ಣೇಶ್ ಗೃಹ ಮಂತ್ರಿಗಳ ನೇರ ಬೆಂಬಲದಿಂದ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದು ಇವರ ಪತ್ನಿ ಕೂಡಾ ಕಳೆದ ಅವಧಿಯಲ್ಲಿ ಗೃಹ ಮಂತ್ರಿಗಳ ನಿವಾಸವಿರುವ ಜಿಲ್ಲಾ ಪಂಚಾಯತ್ ಕ್ಷೇತ್ರ ಆರಗದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದುದು ಇವರ ದಬ್ಬಾಳಿಕೆ ಹೆಚ್ಚಲು ಕಾರಣವಾಗಿದೆ. ಈ ಹಿಂದಿನ ಅವಧಿಯಲ್ಲಿ ಅಂದಿನ ಮಹಿಳಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ವಿಶಾಲಾಕ್ಷಿ ಪ್ರಫುಲ್ಲಚಂದ್ರ ರವರ ಮೇಲೆ ಗ್ರಾಮ ಪಂಚಾಯತ್ ಸಭೆಯಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣವೂ ವಿಚಾರಣೆಯಲ್ಲಿದೆ. ಹಲವು ಕ್ರಿಮಿನಲ್ ಪ್ರಕರಣಗಳ ಇತಿಹಾಸ ಹೊಂದಿರುವ ಈ ಸದಸ್ಯರ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕೆಂದು ಈ ಸಂಧರ್ಭದಲ್ಲಿ ಹೇಳಿದರು.