Headlines

ಗೃಹ ಸಚಿವರ ಜಿಲ್ಲೆಯಲ್ಲಿ ಮಿತಿಮೀರಿದ ರೌಡಿಗಳ ಹಾವಳಿ! ಜೀವ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರರವರ ಜಿಲ್ಲೆಯಲ್ಲೇ ರೌಡಿಗಳ ಹಾವಳಿ ಮಿತಿಮೀರಿದೆ. ರೌಡಿಗಳು ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಿವಮೊಗ್ಗದ ಕುಖ್ಯಾತ ರೌಡಿ ಬಚ್ಚಾ ಅಲಿಯಾಸ್ ಜಮೀರ್ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಹಣ ನೀಡುವಂತೆ ಹೆದರಿಸಲು ಜಮೀರ್ ಸಹಚರರು ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದು, ಈ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಜಮೀರ್ ಶಿವಮೊಗ್ಗದ ಶಾದ್ ನಗರದ ಉದ್ಯಮಿಯಾಗಿರುವ ಅನ್ಸರ್ ಎಂಬುವವರಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಡಿಮ್ಯಾಂಡ್ ಹಾಕಿದ್ದಾನೆ. ವಾಟ್ಸಾಪ್ ಕಾಲ್ ಮೂಲಕ ಬೆದರಿಕೆ ಹಾಕಿದ್ದಾನೆ. ಹೆದರಿಸಲು ಜಮೀರ್ ಸಹಚರರು ಉದ್ಯಮಿ ಮನೆ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಮನೆಯ ಮುಂಬಾಗಿಲಿಗೆ ಹಾನಿ ಮಾಡಿದ್ದಾರೆ. ಉದ್ಯಮಿ ಮನೆ ಬಳಿ ರೌಡಿ ಸಹಚರರು ಬಂದು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ ಕೆಲವು ದಿನಗಳಿಂದ ಕುಖ್ಯಾತ ರೌಡಿಗಳ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೊನ್ನೆಯಷ್ಟೇ ರೌಡಿ ಹೆಬ್ಬೆಟ್ ಮಂಜ ಹೆಸರಿನಲ್ಲಿ ಶಿವಮೊಗ್ಗ ಉದ್ಯಮಿಗೆ ಬೆದರಿಕೆ ಕರೆ ಬಂದಿತ್ತು. ಉದ್ಯಮಿಯಿಂದ 80 ಸಾವಿರ ರೂ. ಹಣವನ್ನು ವಸೂಲಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಮಹಿಳೆಯನ್ನು ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *