WhatsApp Channel Join Now
Telegram Channel Join Now

ಪಶ್ಚಿಮಘಟ್ಟದಲ್ಲಿ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಶುಕ್ರವಾರದ ಹೊತ್ತಿಗೆ ಇನ್ನಷ್ಟು ಚುರುಕುಗೊಂಡಿದೆ. ಪಶ್ಚಿಮಘಟ್ಟ ಭಾಗದ ನದಿಗಳೆಲ್ಲ ಮೈದುಂಬಿ ಹರಿಯುತ್ತಿದ್ದು ಬಯಲು ಸೀಮೆಯ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಹರಾಷ್ಟ್ರ ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿರುವ ಪರಿಣಾಮ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಭಿತಿ ಎದುರಾಗಿದೆ. ಉತ್ತರ ಕನ್ನಡ ಶಿವಮೊಗ್ಗ, ಉಡುಪಿ, ಕೊಡಗು, ದಕ್ಷಿಣ ಕನ್ನಡದಲ್ಲಿ ವಾರದ ಮಳೆ ಶನಿವಾರದ ಹೊತ್ತಿಗೆ ಧಾರಕಾರವಾಗಿ ಸುರಿಯುತ್ತಿದ್ದು ನದಿಗಳೆಲ್ಲ ತುಂಬಿ ಹರಿಯತೊಡಗಿವೆ. ಕೃಷ್ಣ ಮತ್ತು ಕಾವೇರಿ ಕೊಳ್ಲದಲ್ಲಿ ಭಾರಿ ಮಳೆಯ ಪರಿಣಾಮ ಕೆಆರ್‌ಎಸ್‌, ಆಲಮಟ್ಟಿ, ತುಂಗಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ನದೀ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತಗಳು ಈಗಾಗಲೇ ಆದೇಶ ಹೊರಡಿಸಿವೆ. ಹಾಗೇ ನದಿಗೆ ಇಳಿಯದಂತೆ ಮೀನುಗಾರರಿಗೆ ಸರ್ಕಾರ ಸೂಚಿಸಿದೆ.

ಮುಳುಗಡೆಯ ಭೀತಿಯಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮಗಳು

ಮಹರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನೆರೆ ಪರಿಸ್ಥಿತಿ ತಲೆದೊರಿದೆ. ಗೋಕಾಕ್, ಚಿಕ್ಕೋಡಿ ಭಾಗದಲ್ಲಿ ಕೂಡ ಮಳೆ ಪ್ರಮಾಣ ಹೆಚ್ಚಾಗಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ತಗ್ಗಿನ ಪ್ರದೇಶದ ಗ್ರಾಮಗಳಲ್ಲಿ ನೀರು ನುಗ್ಗುವ ಅಪಾಯ ಎದುರಾಗಿದೆ. ಅನೇಕ ಕಡೆ ಸೇತುವೆಗಳು ಮುಳುಗಡೆಯಾಗಿದ್ದು ಹತ್ತಾರು ಗ್ರಾಮಗಳಲ್ಲಿ ಸಂಪರ್ಕ ಕಡಿತವಾಗಿದೆ.

ಮಳೆಯ ಆರ್ಭಟಕ್ಕೆ 2 ಜನ ಬಲಿ

ಬೆಳಗಾವಿಯ ಮಲಪ್ರಭಾ ಮತ್ತು ಮಾರ್ಕಾಂಡೇಯ ನದಿಯ ಪ್ರವಾಹದಲ್ಲಿ ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ. ಮಳೆಯ ರಭಸಕ್ಕೆ ಈಗ 2 ಬಲಿಯಾಗಿದೆ. ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು ಇನ್ನು 3 ದಿನ ಭಾರಿ ಮಳೆ ಹೊಯ್ಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದು ಜನರು ಕತ್ತಲೆಯಲ್ಲಿ ದಿನದೂಡುತ್ತಿದ್ದಾರೆ. ಬೆಳಗಾವಿಯ ಜೊತೆಗೆ ಕೊಡಗು ಮತ್ತು ಉತ್ತರ ಕನ್ನಡದಲ್ಲಿಯೂ ಭಾರಿ ಮಳೆಗೆ ಭೂಕುಸಿತಗಳು ಉಂಟಾಗಿವೆ. ಜೂನ್ ಆರಂಭದಲ್ಲಿಯೇ ವರುಣನ ಆರ್ಭಟಕ್ಕೆ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗದ ತುಂಗಾ, ಶರಾವತಿ ಮತ್ತು ಭದ್ರಾ ನದಿಗಳು ರಭಸದಿಂದ ಹರಿಯತೊಡಗಿದ್ದು ಕೆಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Leave a Reply

Your email address will not be published. Required fields are marked *