ಶಿವಮೊಗ್ಗ ಜಿಲ್ಲೆ ಸಾಗರ ಬ್ಲಾಕ್ ಕಾಂಗ್ರೆಸ್ನ ಮುಖಂಡರ ವಿರುದ್ಧ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಕಳೆದ ಮಾರ್ಚ್ 30 ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಸಮಾಜ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗಿತ್ತು. ಈ ಸಂಬಂಧ ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರದ ಪ್ರಧಾನ ಕಾರ್ಯದರ್ಶಿ ಮಹಾಬಲೇಶ ಕೌತಿ ರವರು ಸಾಗರ ಉಪ ವಿಭಾಗಾಧಿಕಾರಿ ಬಳಿ ಅನುಮತಿ ಕೇಳಿದ್ದರು.
ಈ ಸಂಬಂಧ ಚುನಾವಣಾ ಅಧಿಕಾರಿಯಾದ ಎಸಿಯವರು ಷರತ್ತು ಬದ್ಧ ಅನುಮತಿಯನ್ನು ನೀಡಿದ್ದರು. ಆದರೆ ಕಾರ್ಯಕ್ರಮದ ವೇಳೆ ಎಎಸ್.ಟಿ ತಂಡದ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
ನಿಯಮಗಳಿಗೆ ವಿರುದ್ಧವಾಗಿ ಸಭೆಯಲ್ಲಿ ಊಟದ ವ್ಯವಸ್ಥೆ ಮಾಡಿ, ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಅಧಿಕಾರಿಗಳು ಗಮನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂಸಿಸಿ ನೋಡಲ್ ಅಧಿಕಾರಿ ದೂರು ನೀಡಿದ್ದು ಮಹಾಬಲೇಶ ಕೌತಿ ರವರ ವಿರುದ್ಧ ಆರ್.ಪಿ ಆಕ್ಟ್-1951 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.