Headlines

ಕೇರಳ ಲಾಟರಿ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ ಲಕ್ಷಾಂತರ ರೂ ವಂಚನೆ – ಪ್ರಕರಣ ದಾಖಲು

ಕೇರಳ ಲಾಟರಿ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ ಲಕ್ಷಾಂತರ ರೂ ವಂಚನೆ – ಪ್ರಕರಣ ದಾಖಲು

A Shivamogga man was cheated of ₹1.84 lakh by fraudsters posing as Kerala lottery officials, promising a ₹12 lakh prize and collecting money through QR code payments for fake taxes and charges.

ಶಿವಮೊಗ್ಗ: ಕೇರಳ ಲಾಟರಿ ಬಹುಮಾನ ನೀಡುವುದಾಗಿ ನಂಬಿಸಿ ನಗರದ ವ್ಯಕ್ತಿಯೊಬ್ಬರಿಂದ ₹1.84 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಏಪ್ರಿಲ್ 15ರಂದು ಸಂತ್ರಸ್ತ ವ್ಯಕ್ತಿಯ ಮೊಬೈಲ್‌ಗೆ ವಿವಿಧ ಸಂಖ್ಯೆಗಳ ಮೂಲಕ ಸಂದೇಶಗಳು ಬಂದಿದ್ದವು. ಸಂದೇಶ ಕಳುಹಿಸಿದವರು ತಾವು ಕೇರಳ ಲಾಟರಿ ಪ್ರತಿನಿಧಿಗಳೆಂದು ಹೇಳಿಕೊಂಡು, ದೂರುದಾರರಿಗೆ ₹12 ಲಕ್ಷ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿದ್ದಾರೆ. ಈ ಸುಳ್ಳು ಆಮಿಷಕ್ಕೆ ಒಳಗಾದ ವ್ಯಕ್ತಿ ವಂಚಕರ ಜಾಲಕ್ಕೆ ಸಿಲುಕಿದ್ದಾರೆ.

ನಂತರ ವಾಟ್ಸಾಪ್ ಮೂಲಕ ಕ್ಯೂಆರ್ ಕೋಡ್‌ಗಳನ್ನು ಕಳುಹಿಸಿದ ಆರೋಪಿಗಳು, ಬಹುಮಾನದ ಹಣವನ್ನು ಖಾತೆಗೆ ಜಮಾ ಮಾಡಲು ಟಿಡಿಎಸ್ (TDS), ತೆರಿಗೆ ಮತ್ತು ಪ್ರಕ್ರಿಯಾ ಶುಲ್ಕಗಳನ್ನು ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತರು ತಮ್ಮ ಬ್ಯಾಂಕ್ ಆಫ್ ಬರೋಡಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ₹1,84,296 ವರ್ಗಾವಣೆ ಮಾಡಿದ್ದಾರೆ.

ಹಣ ವರ್ಗಾವಣೆಯಾದ ಬಳಿಕ ವಂಚಕರು ಯಾವುದೇ ಲಾಟರಿ ಮೊತ್ತ ನೀಡದೇ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

About The Author