ಆಗುಂಬೆಯಿಂದ – ರಿಪ್ಪನ್ ಪೇಟೆವರೆಗೆ ಸಿನೀಮೀಯ ಶೈಲಿಯಲ್ಲಿ ಪೊಲೀಸರ ಚೇಸಿಂಗ್ –  ಕಾರು ಬಿಟ್ಟು ಕಾಡಿಗೆ ನುಗ್ಗಿದ ದನಗಳ್ಳರು

ಆಗುಂಬೆಯಿಂದ ಬೆನವಳ್ಳಿವರೆಗೆ ಸಿನೀಮೀಯ ಶೈಲಿಯಲ್ಲಿ ಪೊಲೀಸರ ಚೇಸಿಂಗ್ –  ಕಾರು ಬಿಟ್ಟು ಕಾಡಿಗೆ ನುಗ್ಗಿದ ದನಗಳ್ಳರು

ಬೆಳ್ಳಂಬೆಳಗ್ಗೆ ಹೈ-ವೋಲ್ಟೇಜ್ ಚೇಸಿಂಗ್ – ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಚುರುಕು

Police chased suspected cattle thieves from Agumbe to Benavalli in a dramatic early morning operation. The suspects abandoned their car and escaped into the forest as Agumbe and Ripponpete police launched a drone-assisted search.

ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಸುದೀರ್ಘ ದೂರ ಬೆನ್ನಟ್ಟಿದ ಘಟನೆ ಆಗುಂಬೆಯಿಂದ ರಿಪ್ಪನ್‌ಪೇಟೆ ಸಮೀಪದ ಬೆನವಳ್ಳಿಯವರೆಗೆ ನಡೆದಿದೆ. ಪೊಲೀಸರ ತೀವ್ರ ನಿಗಾ ಹಾಗೂ ಬೆನ್ನಟ್ಟುವಿಕೆಗೆ ಬೆದರಿದ ಖದೀಮರು ತಮ್ಮ ಕಾರನ್ನು ರಸ್ತೆ ಬದಿ ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ಪರಾರಿಯಾಗಿದ್ದಾರೆ.

​ರಿಪ್ಪನ್‌ಪೇಟೆ : ಘಾಟಿ ರಸ್ತೆಯ ನಡುವೆ ಬೆಳಗಿನಜಾವ ಶುರುವಾದ ಆ ಚೇಸಿಂಗ್, ಸಿನಿಮಾ ದೃಶ್ಯವನ್ನೂ ಮೀರಿಸುವಂತಿತ್ತು. ಒಂದೆಡೆ ಸೈರನ್ ಮೊಳಗಿಸುತ್ತಾ ಮಿಂಚಿನಂತೆ ಧಾವಿಸುತ್ತಿದ್ದ ಪೊಲೀಸ್ ಜೀಪ್, ಇನ್ನೊಂದೆಡೆ ಎಸ್ಕೇಪ್ ಆಗಲು ಪ್ರಾಣಭಯದಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಖದೀಮರು. ಕೊನೆಗೆ ಪೊಲೀಸರ ಬಿಗಿಬಲೆಗೆ ಸಿಲುಕುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಕಾರನ್ನು ರಸ್ತೆಬದಿಯಲ್ಲೇ ಬಿಟ್ಟು ಆ ಮೂವರು ಖದೀಮರು ದಟ್ಟ ಅರಣ್ಯದ ಕತ್ತಲಲ್ಲಿ ಕಣ್ಮರೆಯಾಗಿದ್ದಾರೆ!

ಆಗುಂಬೆ ಭಾಗದಲ್ಲಿ ಇತ್ತೀಚೆಗೆ ಸರಣಿಯಾಗಿ ನಡೆಯುತ್ತಿದ್ದ ದನ ಕಳ್ಳತನ ಪ್ರಕರಣದ ಬೆನ್ನತ್ತಿದ್ದ ಆಗುಂಬೆ ಪಿಎಸ್‌ಐ ಶಿವನಗೌಡ ಹಾಗೂ ತಂಡಕ್ಕೆ ಇಂದು ಬೆಳಗಿನಜಾವ ಪಕ್ಕಾ ಸುಳಿವು ಸಿಕ್ಕಿತ್ತು. ಆರೋಪಿಗಳು ಅದೇ ಕಾರಿನಲ್ಲಿ ಸಂಚರಿಸುತ್ತಿರುವ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರನ್ನು ಕಂಡ ಚಾಲಕ ಫುಲ್ ಆಕ್ಸಿಲೇಟರ್ ತುಳಿದು ಕಾರನ್ನು ರಿಪ್ಪನ್‌ಪೇಟೆ ಮಾರ್ಗವಾಗಿ ಎಸ್ಕೇಪ್ ಮಾಡಲು ಮುಂದಾಗಿದ್ದಾನೆ.

ಸಂಗತಿ ತಿಳಿಯುತ್ತಿದ್ದಂತೆಯೇ ಆಗುಂಬೆ ಪೊಲೀಸರು ರಿಪ್ಪನ್‌ಪೇಟೆ ಪಿಎಸ್‌ಐ ರಾಜುರೆಡ್ಡಿ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಕ್ಷಣಾರ್ಧದಲ್ಲಿ ಅಲರ್ಟ್ ಆದ ರಿಪ್ಪನ್‌ಪೇಟೆ ಪೊಲೀಸರು ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಕಾರು ತಡೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ, ಆರೋಪಿಗಳು ಅಲ್ಲಿಯೂ ವಾಹನ ನಿಲ್ಲಿಸದೆ, ಪೆಟ್ರೋಲ್ ಬೆನವಳ್ಳಿಯತ್ತ ಕಾರನ್ನು ಹಾಯಿಸಿದ್ದಾರೆ.

ಚೇಸಿಂಗ್ ತೀವ್ರಗೊಳ್ಳುತ್ತಿದ್ದಂತೆಯೇ ಕಂಗಾಲಾದ ಖದೀಮರು, ಬೆನವಳ್ಳಿ ಬಸ್ ನಿಲ್ದಾಣದ ಪಕ್ಕದ ಕಚ್ಚಾ ರಸ್ತೆಯಲ್ಲಿ ಕಾರನ್ನು ತರಾತುರಿಯಲ್ಲಿ ನಿಲ್ಲಿಸಿದ್ದಾರೆ. ಕಾರಿನಲ್ಲಿದ್ದ ಮೂವರು ಆರೋಪಿಗಳು ಕ್ಷಣಾರ್ಧದಲ್ಲಿ ಬಾಗಿಲು ತೆರೆದು ಕಾಡಿನೊಳಗೆ ನುಗ್ಗಿದ್ದಾರೆ.

ಘಟನೆ ನಡೆದ ತಕ್ಷಣವೇ ಆಗುಂಬೆ ಮತ್ತು ರಿಪ್ಪನ್‌ಪೇಟೆ ಪೊಲೀಸರು ಜಂಟಿಯಾಗಿ ಇಡೀ ಬೆನವಳ್ಳಿ ಅರಣ್ಯ ಪ್ರದೇಶವನ್ನು ಜಾಲಾಡಿದ್ದಾರೆ. ತಪ್ಪಿಸಿಕೊಂಡ ಆರೋಪಿಗಳ ಚಲನವಲನ ಪತ್ತೆಹಚ್ಚಲು ಡ್ರೋನ್ ಕೆಮೆರಾಗಳನ್ನು ಬಳಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಆರೋಪಿಗಳು ಬಿಟ್ಟುಹೋದ ಕಾರನ್ನು ಜಪ್ತಿ ಮಾಡಲಾಗಿದ್ದು, ಕಾರಿನೊಳಗಿನ ಸುಳಿವುಗಳನ್ನು ಆಧರಿಸಿ ತನಿಖೆ ಚುರುಕುಗೊಂಡಿದೆ.

​ಈ ಕಳ್ಳತನ ಜಾಲದ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ ಪೊಲೀಸರು.

ದೂನ , ಬೆನವಳ್ಳಿ  ಸಾರ್ವಜನಿಕರು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಎಚ್ಚರಿಕೆ ನೀಡಲಾಗಿದೆ.

About The Author

Exit mobile version