ತಂದೆಯ ಪ್ರಾಣ ಉಳಿಸಿದ 9 ವರ್ಷದ ರಿಯಲ್ ಹೀರೋ: ಬಾಲಕ ನಂದನ್ ಸಾಹಸಕ್ಕೆ ತಹಶೀಲ್ದಾರ್ ಸಲಾಮ್!
A 9-year-old boy, Nandan from Goragodu in Hosanagara taluk, saved his father’s life by alerting villagers after he was swept away in a stream. Tahsildar Bharath Raj honoured the young hero for his extraordinary courage and presence of mind.
ಹೊಸನಗರ: ಕೇವಲ 9 ವರ್ಷದ ಬಾಲಕನೊಬ್ಬ ತನ್ನ ಸಮಯಪ್ರಜ್ಞೆ ಹಾಗೂ ಅಪ್ರತಿಮ ಧೈರ್ಯದಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆಯನ್ನು ರಕ್ಷಿಸಿ ‘ರಿಯಲ್ ಹೀರೋ’ ಎನಿಸಿಕೊಂಡಿದ್ದಾನೆ. ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ ನಂದನ್ ಎಂಬ ಬಾಲಕನೇ ಈ ಅಪ್ರತಿಮ ಸಾಹಸ ಮೆರೆದವನು. ಈತನ ಕಾರ್ಯಕ್ಕೆ ಇದೀಗ ಹೊಸನಗರ ತಹಶೀಲ್ದಾರ್ ಭರತ್ ರಾಜ್ ಸೇರಿದಂತೆ ಇಡೀ ಸಮಾಜವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ನಂದನ್ ಮತ್ತು ಆತನ ತಂದೆ ಚಂದ್ರು ಅವರು ಗೊರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಕಾಣಿಸಿಕೊಂಡು, ಕಾಲು ಜಾರಿ ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಸುಮಾರು 2 ಕಿಲೋಮೀಟರ್ಗಳಷ್ಟು ದೂರ ಕೊಚ್ಚಿಕೊಂಡು ಹೋಗಿದ್ದಾರೆ.
ತನ್ನ ಕಣ್ಣೆದುರೇ ತಂದೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡರೂ ಎದೆಗುಂದದ ಬಾಲಕ ನಂದನ್, ನದಿ ದಡದ ಗುಂಟ 2 ಕಿಲೋಮೀಟರ್ವರೆಗೆ ಓಡುತ್ತಲೇ ಹಿಂಬಾಲಿಸಿದ್ದಾನೆ. ನಂತರ ಸಮೀಪದ ಮನೆಗಳಿಗೆ ಓಡಿಹೋಗಿ, “ನನ್ನ ತಂದೆ ಹೊಳೆಯಲ್ಲಿ ತೇಲಿ ಹೋಗುತ್ತಿದ್ದಾರೆ, ದಯವಿಟ್ಟು ಬಂದು ಕಾಪಾಡಿ” ಎಂದು ಸ್ಥಳೀಯರ ನೆರವು ಕೋರಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದರು. ಅದೇ ಹೊತ್ತಿಗೆ ನೀರಿನಲ್ಲಿ ತೇಲುತ್ತಿದ್ದ ತಂದೆಯ ಜರ್ಕಿನ್ ಅನ್ನು ಗುರುತಿಸಿದ ನಂದನ್, ತಂದೆ ಅದೇ ಸ್ಥಳದಲ್ಲಿ ಇರಬಹುದು ಎಂದು ನಿಖರವಾಗಿ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ಥಳೀಯರು ಚಂದ್ರು ಅವರನ್ನು ನೀರಿನಿಂದ ಮೇಲೆತ್ತಿ, ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಈ ಸಾಹಸದ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರು ಬಾಲಕ ನಂದನ್ ಹಾಗೂ ಆತನ ಪೋಷಕರನ್ನು ತಮ್ಮ ಕಚೇರಿಗೆ ಆಹ್ವಾನಿಸಿ, ಬಾಲಕನ ಬೆನ್ನು ತಟ್ಟಿ ತಾಲೂಕ್ ಆಡಳಿತದ ವತಿಯಿಂದ ಸನ್ಮಾನಿಸಿದರು. ಅಲ್ಲದೆ, ಹೊಸನಗರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ, ವಿಶ್ವಕರ್ಮ ಸಮಾಜ ವತಿಯಿಂದಲೂ ಈ ಪುಟಾಣಿ ಜೀವ ರಕ್ಷಕನಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗೌತಮ್ ಆಚಾರ್ಯ, ವಿಎಚ್ಪಿ ಸಂಚಾಲಕ ಸುದೀಂದ್ರ ಪಂಡಿತ್, ಪತ್ರಕರ್ತ ನಗರ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಗೋರಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಈ ಬಾಲಕನಿಗೆ ಸರ್ಕಾರದಿಂದ ಶೌರ್ಯ ಪ್ರಶಸ್ತಿ ಹಾಗೂ ಮುಂದಿನ ಶಿಕ್ಷಣಕ್ಕಾಗಿ ವಿಶೇಷ ಸಹಾಯಧನ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಂಚನಾಲ ಮಾರಿಕಾಂಬಾ ಜಾತ್ರಾ ಮಹೋತ್ಸವ: ಭಕ್ತಿಭಾವದ ಸಾಗರದಲ್ಲಿ ಮಿಂದೆದ್ದ ಭಕ್ತ ಸಮೂಹ Kenchanaala Marikamba Jatre was celebrated with…
ಹಸೆಮಣೆಗಿಂತ ವೃತ್ತಿಜೀವನಕ್ಕೆ ಆದ್ಯತೆ: ಬದಲಾಗುತ್ತಿರುವ ಭಾರತೀಯ ಮಹಿಳೆಯರ ಮನಸ್ಥಿತಿ! Changing trends among Indian women show a growing…
ಮಳೆಯಿಂದ ಬಸ್ ನಿಲ್ದಾಣದಲ್ಲಿ ನಿಂತಿದ್ದವರು ಪೊಲೀಸರ ಬಲೆಗೆ : ಸಾವಿರಾರು ಮೌಲ್ಯದ ಗಾಂಜಾ ವಶ Three people were arrested…
ಕಾವೇರಿ ಲೋನ್ ಸರ್ವೀಸ್ ನಂಬಿ ₹12.50 ಲಕ್ಷ ಕಳೆದುಕೊಂಡ ರೈತ; ಯೂಟ್ಯೂಬ್ ಜಾಹೀರಾತು ಮೂಲಕ ವಂಚನೆ Farmer from Thirthahalli…
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆರೋಪಿ ಪ್ರದೋಷ್ಗೆ ‘ಮಾಫಿ ಸಾಕ್ಷಿ’ಯಾಗಲು ಕೋರ್ಟ್ ಅಸ್ತು Renukaswamy murder case takes…
ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ KSRTC ಬಸ್ನ ಟೈರ್; ತಪ್ಪಿದ ಭಾರಿ ಅನಾಹುತ KSRTC bus travelling from Udupi to…