ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸ್ಟಾಫ್ ನರ್ಸ್ ಚಿಕಿತ್ಸೆ ಫಲಕಾರಿಯಾಗದೆ ಸಾವು
A 30-year-old staff nurse who attempted suicide by self-immolation in Sagara has died despite treatment at Manipal KMC Hospital. Family issues are suspected behind the incident.
ಸಾಗರ: ಆತ್ಮಹತ್ಯೆಗೆ ಯತ್ನಿಸಿದ್ದ ಡಯಾಗ್ನೋಸ್ಟಿಕ್ ಕೇಂದ್ರದ ಸ್ಟಾಫ್ ನರ್ಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ಘಟನೆ ನಡೆದಿದೆ.
ಶ್ವೇತಾ (30) ಮೃತ ಮಹಿಳೆಯಾಗಿದ್ದು, ಮಾ.29ರಂದು ಸೊರಬ ತಾಲ್ಲೂಕಿನ ಉಳವಿಯಲ್ಲಿರುವ ಪತಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಶ್ವೇತಾ ಅವರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.90ರಷ್ಟು ಸುಟ್ಟ ಗಾಯಗಳಿಂದ ಸಂಕಷ್ಟದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಉಳವಿಯ ನಿವಾಸಿಯಾಗಿದ್ದ ಶ್ವೇತಾ, ಏಳು ವರ್ಷಗಳ ಹಿಂದೆ ನವೀನ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದ್ದು, ಶ್ವೇತಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದಂಪತಿ ಅತ್ತೆಯ ಮನೆಯ ಹಿಂಭಾಗದಲ್ಲಿ ವಾಸವಾಗಿದ್ದರು.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಕೌಟುಂಬಿಕ ಸಮಸ್ಯೆಗಳು ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಸಂಸ್ಥೆಯ ಮ್ಯಾನೇಜರ್ ಮಾತನಾಡಿ, “ಶ್ವೇತಾ ಕಳೆದ ಆರು ವರ್ಷಗಳಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನರ್ಸಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ಅವರು ಹಲವಾರು ಭಾಷೆಗಳನ್ನು ತಿಳಿದಿದ್ದು, ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೂ ನೋವು ತಂದಿದೆ” ಎಂದು ಸಂತಾಪ ಸೂಚಿಸಿದರು.




