
ಮಾರಿಕಾಂಬ ಜಾತ್ರೆ ವೇಳೆ ಸಾಗರದ ಬಸ್ ನಿಲ್ದಾಣದಲ್ಲಿ ಬಂಗಾರದ ಚೈನ್ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್
A 43-year-old woman from Hunsur, Mysuru district, was arrested for stealing a 12-gram gold chain at Sagara KSRTC bus stand during the Marikamba fair. Police recovered the stolen chain worth ₹1.30 lakh.
ಸಾಗರ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಚಿನ್ನದ ಸರ ಕಳ್ಳತನ ಪ್ರಕರಣವನ್ನು ಭೇದಿಸಿರುವ ಸಾಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಸಿದ್ಧ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಜಾತ್ರೆಗೆ ಸಂಬಂಧಿಕರ ಮನೆಗೆ ಬಂದಿದ್ದ ಜಯಮ್ಮ ಅವರು ತಮ್ಮ ಊರಿಗೆ ಹಿಂತಿರುಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಬಸ್ ಹತ್ತಲು ಮುಂದಾದಾಗ, ಅವರ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 12 ಗ್ರಾಂ ತೂಕದ ಬಂಗಾರದ ಸರ ಕಳುವಾಗಿರುವುದು ಗಮನಕ್ಕೆ ಬಂದಿದೆ.
ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಬೆನಕಪ್ರಸಾದ್ ಎನ್.ಜೆ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ಇನ್ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಪಿಎಸ್ಐ ಶಾಂತರಾಜ್ ಜೆ.ಹೆಚ್, ಮಹಿಳಾ ಎಎಸ್ಐ ಮೀರಾಬಾಯಿ ಸೇರಿದಂತೆ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತನಿಖೆಯ ಫಲವಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಿವಾಸಿ 43 ವರ್ಷದ ಸುಮಿತ್ರ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ ಕಳುವಾಗಿದ್ದ ಸುಮಾರು ₹1.30 ಲಕ್ಷ ಮೌಲ್ಯದ 12 ಗ್ರಾಂ ತೂಕದ ಬಂಗಾರದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




